ಚಿಕ್ಕೋಡಿ: ಪ್ರತಿವರ್ಷ ಅತೀ ವಿಜೃಂಭಣೆಯಿಂದ ನಡೆಸುವ ಉತ್ತರ ಕರ್ನಾಟಕದ ಅದ್ದೂರಿ ಹುಕ್ಕೇರಿ ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ಸರಳವಾಗಿ ನಡೆಸಲಾಯಿತು.
ಪ್ರತಿವರ್ಷ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿರುವ ಹುಕ್ಕೇರಿ ಹಿರೇಮಠದ ವತಿಯಿಂದ ಆಚರಿಸುತ್ತಿದ್ದ ಅದ್ದೂರಿ ದಸರಾವನ್ನು ಈ ಬಾರಿ ಕೊಡಗು ಮತ್ತು ಕೇರಳ ನೆರೆ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ರಾಜ್ಯ ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎನ್ ಜಯರಾಮ್ ಅತಿಥಿಯಾಗಿ ಆಗಮಿಸಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್ ರಾಮಚಂದ್ರನ್ ಭಾಗವಹಿಸಿದ್ದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊಡಗು ಮತ್ತು ಕೇರಳದಲ್ಲಿ ಭೀಕರ ನೆರೆಗೆ ಸಿಕ್ಕ ಜನರಿಗೆ ಬೇಗ ಪುನರ್ವಸತಿ ಸಿಗುವಂತಾಗಲಿ. ಆ ಕಾರಣದಿಂದಲೇ ಈ ಬಾರಿಯ ದಸರಾ ಮಹೋತ್ಸವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದ ರಮೇಶ್ ಕತ್ತಿ ಲೋಕಸಭಾ ಚುಣಾವಣೆಗೆ ನಾನು ಸೇರಿದಂತೆ ಅಣ್ಣಾ ಸಾಹೇಬ್ ಜೊಲ್ಲೆ, ಪ್ರಭಾಕರ್ ಕೋರೆ, ಅಮಿತ್ ಕೋರೆ, ಲಕ್ಷ್ಮಣ ಸವದಿ ಸೇರಿದಂತೆ ಎಲ್ಲರೂ ಆಕಾಂಕ್ಷಿಯಾಗಿದ್ದಾರೆ. ಆದರೆ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಿ ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದು ನಮ್ಮ ಉದ್ದೇಶ ಅಂತ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv