ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಕೈಚಳಕ ಮುಂದುವರಿದಿದ್ದು, ಈ ಬಾರಿ ರಾಜರಾಜೇಶ್ವರಿನಗರ ಬಳಿಯ ಬಿಎಚ್ಇಎಲ್ ಲೇಔಟ್ ಮನೆಯೊಂದರಲ್ಲಿ ಲಾಕರ್ ಸಮೇತ 750 ಗ್ರಾಂ ಗಿಂತಲೂ ಹೆಚ್ಚು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಬಿಎಚ್ಇಎಲ್ ನಿವೃತ್ತ ನೌಕರ ಚಿಕ್ಕಣ್ಣ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಚಿಕ್ಕಣ್ಣ ಹಾಗೂ ಕುಟುಂಬಸ್ಥರು ಕಾರ್ಯಕ್ರಮ ನಿಮಿತ್ತ ಅರಸಿಕೆರೆಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.
ಇತ್ತ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಆಗಮಿಸಿದಾಗ ಕುಟುಂಬಸ್ಥರಿಗೆ ಶಾಕ್ ಕಾದಿತ್ತು. ಬಾಗಿಲು ತೆರೆದು ಮನೆಯ ಒಳಗೆ ಹೋಗುತ್ತಿದ್ದಂತೆ, ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಕಳ್ಳರು ಲಾಕರ್ ಸಮೇತ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ್ದಾರೆ.
ವೃದ್ಧ ಚಿಕ್ಕಣ್ಣ ಹಾಗೂ ಅವರ ಪುತ್ರ ಮಂಜುನಾಥ್ ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಈ ಕುರಿತು ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv