ಬೆಂಗಳೂರು: ಬೆಳಕಿನ ಹಬ್ಬ ಈ ಬಾರಿ ಬೆಂಗಳೂರಿನ ಕೆಲವರ ಮನೆಯಲ್ಲಿ ಕತ್ತಲೆ ಆವರಿಸುವಂತೆ ಮಾಡಿದೆ. ದೀಪಾವಳಿ (Deepavali) ಹಬ್ಬದ ಪಟಾಕಿ ಸದ್ದಿನ ಭದ್ರತೆಯಲ್ಲಿ ಖ್ಯಾತ ಬಹುಭಾಷಾ ಹಿರಿಯ ನಟಿಯ ಮನೆ ಸೇರಿ ಹಲವು ಮನೆಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.
ಹೌದು, ಬಹುಭಾಷಾ ಹಿರಿಯ ನಟಿ ವಿನಯಪ್ರಸಾದ್ (Vinaya Prasad) ಮನೆಯ ಬಾಗಿಲು ಮುರಿದು ಖದೀಮರು ಮನೆಯಲ್ಲಿದ್ದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನ ದೋಚಿಕೊಂಡು ಹೋಗಿದ್ದಾರೆ. ದೀಪಾವಳಿ ಹಬ್ಬಕ್ಕೆ ಕುಟುಂಬ ಸಮೇತರಾಗಿ ಹಿರಿಯ ನಟಿ ವಿನಯ ಪ್ರಸಾದ್ ಅವರು, ತಮ್ಮ ಹುಟ್ಟೂರು ಉಡುಪಿಗೆ ಹೋಗಿದ್ದರು. ಊರಿಗೆ ಹೋಗಿರುವುದನ್ನು ಗಮನಿಸಿದ ಕಳ್ಳರು ದೀಪಾವಳಿ ಹಬ್ಬದ ದಿನ ಮನೆ ಬೀಗ ಮುರಿದು 7 ಸಾವಿರ ರೂಪಾಯಿ ನಗದು ದೋಚಿಕೊಂಡು ಹೋಗಿದ್ದಾರೆ.
ವಿನಯ ಪ್ರಸಾದ್ ಕುಟುಂಬ ಹಬ್ಬ ಮುಗಿಸಿ ನಂದಿನಿ ಲೇಔಟ್ನಲ್ಲಿರುವ (Nandini Layout) ತಮ್ಮ ಮನೆಗೆ ಬಂದಾಗ ಕಳ್ಳತನ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಕಳ್ಳತನ ಸಂಬಂಧ ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್
ದೀಪಾವಳಿ ಹಬ್ಬದ ದಿನವೇ ಉತ್ತರ ವಿಭಾಗದ ನಾಲ್ಕೈದು ಠಾಣಾ ವ್ಯಾಪ್ತಿಯಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ. ಜೆಸಿ ನಗರ, ಮಲ್ಲೇಶ್ವರಂ, ಸುಬ್ರಹ್ಮಣ್ಯನಗರ, ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಖದೀಮರು ತಮ್ಮ ಕರಾಮತ್ತನ್ನು ತೋರಿಸಿದ್ದಾರೆ. ಕಳ್ಳರು ಮನೆ ಮಾಲೀಕರು ಮನೆಯಲ್ಲಿ ಇಲ್ಲದೇ ಇರುವುದು ಮತ್ತು ದೀಪಾವಳಿ ಹಬ್ಬದಲ್ಲಿ ದೊಡ್ಡ ಮಟ್ಟದ ಪಟಾಕಿ ಹೊಡೆಯುವುದನ್ನೇ ಕಳ್ಳರು ಬಂಡವಾಳವಾನ್ನಾಗಿ ಮಾಡಿಕೊಂಡಿದ್ದಾರೆ. ಪಟಾಕಿ ಸದ್ದಿನ ನಡುವೆ ಮನೆಗಳ ಬೀಗ ಮುರಿಯುವ ಶಬ್ಧ ಆಚೇ ಬರದ ರೀತಿಯಲ್ಲಿ ನೋಡಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಒಟ್ಟಾರೆ ದೀಪಾವಳಿ ಹಬ್ಬದ ಸಮಯದಲ್ಲಿ ಸರಣಿ ಮನೆಗಳ್ಳತನವಾಗಿರುವುದು ಉತ್ತರ ವಿಭಾಗದ ಪೊಲೀಸರ ನಿದ್ದೆಗೆಡಿಸಿದ್ದು ಕಳ್ಳತನವಾಗಿರುವ ರಾಜಗೋಪಾಲ ನಗರ, ಮಲ್ಲೇಶ್ವರಂ, ಜೆ.ಸಿ ನಗರ, ಸುಬ್ರಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿಕೊಂಡು ಖದೀಮರ ಬೇಟೆಗೆ ಪೊಲೀಸರು ಇಳಿದಿದ್ದಾರೆ. ಇದನ್ನೂ ಓದಿ: ಶಾಸಕ ಬೆಲ್ಲದ್ ಹೆಸರಿನಲ್ಲಿ ಡೆತ್ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ