ಬೆಂಗಳೂರು: ಎಸ್ಐಆರ್ ಮುಗಿದ ತಕ್ಷಣವೇ ರಾಜ್ಯದಲ್ಲಿ ಗೃಹಲಕ್ಷ್ಮಿ ಮರುಪರಿಶೀಲನೆ ಆಗಲಿದೆ. ಈಗಾಗಲೇ ಗೃಹಲಕ್ಷ್ಮೀ ಫಲಾನುಭವಿಗಳ ಪತ್ತೆ ಹಚ್ಚುವುದಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಗೃಹಲಕ್ಷ್ಮಿ ಅರ್ಜಿ ಮರುಪರಿಶೀಲನೆಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಸರ್ಕಾರ ಆದೇಶಿಸಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಅದೇ ರೀತಿ, ತಾಲೂಕು ಮಟ್ಟದ ಸಮಿತಿಯಲ್ಲಿ ತಹಸೀಲ್ದಾರ್ ಮತ್ತು ತಾಲ್ಲೂಕು ಮಟ್ಟದ ಸರ್ಕಾರದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಈ ಸಮಿತಿಯಲ್ಲಿ ಇರಲಿದ್ದಾರೆ. ಈ ಸಮಿತಿಯ ಸಮ್ಮುಖದಲ್ಲೇ ಗೃಹಲಕ್ಷ್ಮೀ ಅರ್ಜಿ ಮರು ಪರಿಶೀಲನೆ ಆಗಬೇಕಿದೆ. ಸಮೀಕ್ಷೆಗೆ ಹೋದಾಗ ಯೋಜನೆ ಫಲಾನುಭವಿಗಳು ಭಾವಚಿತ್ರದ ಜೊತೆಗೆ ಮತದಾರರ ಗುರುತಿನ ಚೀಟಿ ನೀಡುವುದು ಕಡ್ಡಾಯಗೊಳಿಸಲಾಗಿದೆ.
ಮರು ಪರಿಶೀಲನೆ ವೇಳೆ ಪಿಂಚಣಿದಾರರು, ಐಟಿ, ಜಿಎಸ್ಟಿದಾರರು, ಸರ್ಕಾರಿ ಸೇವೆಯಲ್ಲಿರುವವರು ಹಾಗೂ ನಿವೃತ್ತಿ ಪಿಂಚಣಿ ಪಡೆಯುತ್ತಿರುವವರ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಮಾರ್ಗಸೂಚಿ ಏನು?
1. ಆಹಾರ ಇಲಾಖೆಯ ಡೇಟಾನಲ್ಲಿ ಲಭ್ಯವಿರುವ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಫಲಾನುಭವಿಗಳನ್ನು ಪತ್ತೆ ಹಚ್ಚಬೇಕು.
2. ಪ್ರತಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಯೋಮೆಟ್ರಿಕ್ ಪರಿಶೀಲಿಸಿ ಗುರುತು ಹಚ್ಚಬೇಕು.
3. ಆಹಾರ ಇಲಾಖೆಯ ಡೇಟಾ ಬೇಸ್ನಲ್ಲಿ ಬಯೋಮೆಟ್ರಿಕ್ ಇರುವ ಫಲಾನುಭವಿ ಗೃಹಲಕ್ಷ್ಮೀ ಯೋಜನೆಗೆ ಬಯೋಮೆಟ್ರಿಕ್ ಕೊಡಬೇಕು.
4. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಗಳಲ್ಲಿ ಬಯೋಮೆಟ್ರಿಕ್ ಕೊಡಬೇಕು.
5. ಗೃಹಲಕ್ಷ್ಮೀ ಫಲಾನುಭವಿಗಳು ಸ್ವಇಚ್ಛೆಯಿಂದ ಸೌಲಭ್ಯ ನಿರಾಕರಿಸಬಹುದಾಗಿದೆ.



