ಗೌರಿಶಂಕರ್ ಅಭಿನಯದ `ಕೆರೆಬೇಟೆ’ (Kerebete) ಚಿತ್ರದ ಟ್ರೈಲರ್ (Trailer) ಲಾಂಚ್ ಆಗಿದೆ. ಹಾಗೆ ಬಿಡುಗಡೆಗೊಂಡಿರುವ ಈ ಟ್ರೈಲರ್ ದಿನಗಳು ಹೊರಳಿಕೊಳ್ಳುತ್ತಲೇ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಾ, ಟ್ರೆಂಡಿಂಗ್ ನತ್ತ ದಾಪುಗಾಲಿಡುತ್ತಿದೆ. ಸಾಮಾನ್ಯವಾಗಿ ಒಂದು ಜನಪ್ರಿಯ ಅಲೆಯ ಅಬ್ಬರದ ನಡುವೆ ಅದಕ್ಕೆ ಹೊರತಾದಂತೆ ಕಾಣಿಸುವ ಚಿತ್ರವೊಂದರ ಸುಳಿವು ಸಿಕ್ಕರೂ ಸಾಕು, ತಾನೇ ತಾನಾಗಿ ಅದರತ್ತ ಪ್ರೇಕ್ಷಕರು ಆಕರ್ಷಿತರಾಗುತ್ತಾರೆ. ಆ ರೀತಿಯಲ್ಲಿಯೇ ಕೆರೆಬೇಟೆ ಕೂಡಾ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದೀಗ ಟ್ರೈಲರ್ ನೋಡಿದವರೆಲ್ಲ ರೋಮಾಂಚಿತರಾಗಿದ್ದಾರೆ. ಅದರ ಸುತ್ತ ಗರಿಗೆದರಿಕೊಂಡಿರುವ ನಿರೀಕ್ಷೆಗಳನ್ನು ಕಂಡು ಚಿತ್ರತಂಡ ಅಕ್ಷರಶಃ ಥ್ರಿಲ್ ಆಗಿದೆ.
ಹಳ್ಳಿ ವಾತಾವರಣದ ಕಥೆ ಎಂದಾಕ್ಷಣ ಒಂದಷ್ಟು ಭಾಗಗಳ ಭಾಷಾ ಶೈಲಿಯನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮಲೆನಾಡಿನಲ್ಲಿ ಘಟಿಸುವ ಒಂದಷ್ಟು ಕಥಾನಕಗಳು ಬಂದಿದ್ದರೂ ಕೂಡಾ, ಆ ಭಾಗದ ಭಾಷೆಯನ್ನು ಪರಿಪೂರ್ಣವಾಗಿ ಬಳಸಿಕೊಂಡಿದ್ದು ವಿರಳ. ಆದರೆ, ಕೆರೆಬೇಟೆ ಚಿತ್ರವಿಡೀ ಅಂತಹ ಮಲೆನಾಡು ಭಾಷೆಗಳ ಗಂಧ ತುಂಬಿಕೊಂಡಂತಿದೆ. ಅದು ಕರುನಾಡಿನ ಎಲ್ಲ ಭಾಗಗಳ ಪ್ರೇಕ್ಷಕರಿಗೂ ಹೊಸತನದೊಂದಿಗೆ ಸೋಕುವ ಸೂಚನೆಗಳೂ ಕಾಣಿಸುತ್ತಿವೆ. ಇದೇ ಟ್ರೈಲರ್ ಮೂಲಕ ಒಟ್ಟಾರೆ ಕೆರೆಬೇಟೆ ಕಥನದ ನಾನಾ ಮಜಲುಗಳು ಅನಾವರಣಗೊಂಡಿವೆ. ಇದು ಎಲ್ಲ ಅಭಿರುಚಿಯ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಫುಲ್ ಮೀಲ್ಸ್ ಅನ್ನೋದು ಕೂಡಾ ಸದರಿ ಟ್ರೈಲರ್ ನೊಂದಿಗೆ ಸಾಬೀತಾಗಿದೆ.
ಕೆರೆಬೇಟೆಯ ಸುತ್ತಾ ಪ್ರೀತಿ, ಜಾತಿ, ಮೇಲು ಕೀಳು, ಬಡತನ ಮುಂತಾದ ಅಂಶಗಳೊಂದಿಗೆ ರಗಡ್ ಕಥಾನಕದ ಝಲಕ್ಕುಗಳು ಈ ಟ್ರೈಲರ್ ಮೂಲಕ ತೆರೆದುಕೊಂಡಿದೆ. ಕಾಡ ಗರ್ಭದ ಸಹಜ ಛಾಯೆಯಲ್ಲಿ ಚಲಿಸೋ ಕಥೆಯೆಂದರೇನೇ ಥ್ರಿಲ್ ಆಗಿ ಕಾಯೋ ಬಹುದೊಡ್ಡ ಪ್ರೇಕ್ಷಕ ವರ್ಗವಿದೆ. ಅದರಲ್ಲಿಯೂ ಕ್ಲಾಸ್, ಮಾಸ್ ಕಂಟೆಂಟಿನ ಸಮಾಗಮದಂಥಾ ಚಿತ್ರವೆಂದಮೇಲೆ ಸಂಚಲನ ಸೃಷ್ಟಿಯಾಗೋದುಜಜ ಸಹಜ. ಈ ನಿಟ್ಟಿನಲ್ಲಿ ನೋಡಹೋದರೆ, ಕೆರೆಬೇಟೆ ಕಟ್ಟುಮಸ್ತಾದ ಕಥೆಯ ಮೂಲಕ ಮೈಕೈ ತುಂಬಿಕೊಂಡಿರೋದನ್ನು ಈ ಟ್ರೈಲರ್ ಸಾಕ್ಷೀಕರಿಸಿದೆ.
ಜೋಕಾಲಿ, ರಾಜಹಂಸ ಮುಂತಾದ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ಗೌರಿಶಂಕರ್ (Gowrishankar) ಕೆರೆಬೇಟೆ ನಾಯಕನಾಗಿ ಮರಳಿದ್ದಾರೆ. ಅವರ ಪಾತ್ರದ ರಗಡ್ ಲುಕ್ ನೋಡುಗರನ್ನೆಲ್ಲ ಸೆಳೆಯುವಂತಿದೆ. ಜೈಶಂಕರ್ ಪಟೇಲ್ ಜನಮನ ಸಿನಿಮಾ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಕೆರೆಬೇಟೆ, ರಾಜ್ ಗುರು ನಿರ್ದೇಶನದಲ್ಲಿ ರೂಪುಗೊಂಡಿದೆ. ಇದರ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯನ್ನು ಗೌರಿಶಂಕರ್ ಮತ್ತು ನಿರ್ದೇಶಕರು ಒಟ್ಟುಗೂಡಿ ರೂಪಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ರಾಜ್ ಗುರು ವಿಶಿಷ್ಟವಾದ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರೆಂಬುದಕ್ಕೂ ಈ ಟ್ರೈಲರಿನಲ್ಲಿ ಸಾಕ್ಷಿಗಳಿದ್ದಾವೆ.
ನಿಖರವಾಗಿ ಹೇಳಬೇಕೆಂದರೆ, ಕೆರೆಬೇಟೆ ಟ್ರೈಲರ್ ಈ ವರ್ಷದ ಪ್ರಾಮಿಸಿಂಗ್ ಟ್ರೈಲರ್ ಆಗಿ ದಾಖಲಾಗುತ್ತದೆ. ಈ ವರ್ಷದ ಆರಂಭದಿಂದಲೇ ಭಿನ್ನ ಪ್ರಯೋಗಗಳ, ಹೊಸಾ ಹಾದಿಯ ಒಂದಷ್ಟು ಸಿನಿಮಾಗಳು ತೆರೆಗಾಣುತ್ತಿವೆ. ಅದರಲ್ಲಿ ಬಹುತೇಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡ ಚಿತ್ರರಂಗದ ಪಾಲಿಗೆ ಭಿನ್ನವಾದೊಂದು ಪಥ ತೆರೆದುಕೊಂಡಿರುವ ಈ ಘಳಿಗೆಯಲ್ಲಿ ಕೆರೆಬೇಟೆ ಟ್ರೈಲರ್ ಮತ್ತಷ್ಟು ನಿರೀಕ್ಷೆ ಮೂಡಿಸುವಂತಿದೆ. ಇದೀಗ ಟ್ರೈಲರ್ ನೋಡಿದವರೆಲ್ಲರೊಳಗೂ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕೌತುಕ ಮೂಡಿಕೊಂಡಿದೆ. ಅದು ಕೆರೆಬೇಟೆ ಟ್ರೈಲರಿನ ನಿಜವಾದ ಸಾರ್ಥಕತೆ.
ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ವಲ್ಲಭ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆಗೊಳ್ಳಲಿದೆ.