ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಣೆ ಹೊರಡಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದ ಪ್ರಸಂಗ ಇಂದು ಪರಿಷತ್ ನಲ್ಲಿ ನಡೆಯಿತು. ಸೋಮವಾರ ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಚಿತ್ರ ವೀಕ್ಷಿಸಲು ಸಚಿವರಿಗೆ ಮತ್ತು ಶಾಸಕರಿಗೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲರೂ ಮಂತ್ರಿ ಮಾಲ್ ಥಿಯೇಟರ್ ಗೆ ಸಿನಿಮಾ ವೀಕ್ಷಿಸಲು ಬರಬೇಕೆಂದು ಆಹ್ವಾನ ನೀಡಿದ್ದರು. ಇದರ ಬೆನ್ನಲ್ಲೇ ಇಂದು ವಿಧಾನ ಪರಿಷತ್ ನಲ್ಲಿ ಬಸವರಾಜ ಹೊರಟ್ಟಿ ಕೂಡ ಪ್ರಕಟಣೆ ಹೊರಡಿಸಿದರು. ಅದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಯಿತು. ಸಿನಿಮಾ ವೀಕ್ಷಣೆಯ ವಿಚಾರವನ್ನು ಕೂಡಲೇ ಹಿಂಪಡೆಯಬೇಕೆಂದು ಕಾಂಗ್ರಸ್ ಪಟ್ಟು ಹಿಡಿಯಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, “ದಿ ಕಾಶ್ಮೀರ್ ಫೈಲ್ಸ್ ಒಂದೇ ಸಿನಿಮಾ ಏಕೆ, ಫರ್ಜಾನಾ ಮತ್ತು ವಾಟರ್ ಸಿನಿಮಾವನ್ನು ತೋರಿಸಿ’ ಎಂದರು. ಮಾತನ್ನು ಮುಂದುವರೆಸಿದ ಹರಿಪ್ರಸಾದ್ “ಕೆಲವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವು ಯಾವ ಸಿನಿಮಾ ನೋಡಬೇಕು ಅಂತ ಸದನದಲ್ಲಿ ಹೇಳುವ ಹಾಗಿಲ್ಲ. ಸರಕಾರ ಇರುವುದು ಸಿನಿಮಾ ತೋರಿಸುವುದಕ್ಕೆ ಅಲ್ಲ’ ಎಂದು ನುಡಿದರು. ಇದನ್ನೂ ಓದಿ: ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ
ಇನ್ನೋರ್ವ ಸದಸ್ಯರಾದ ಸಲೀಂ ಅಹಮದ್ ಕೂಡ ಮಾತನಾಡಿ ‘ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು’ ಎಂದು ಪ್ರಶ್ನಿಸಿದರು. ಕೊನೆಗೆ ಸಚಿವ ಸೋಮಶೇಖರ್ ಮಾತನಾಡಿ, ‘ಯಾರಿಗೂ ಕಡ್ಡಾಯ ಇಲ್ಲ, ಇಷ್ಟ ಇದ್ರೆ ನೋಡಿ’ ಎಂದು ಪ್ರತಿಭಟಿಸಿದ ಸದಸ್ಯರಿಗೆ ಉತ್ತರ ನೀಡಿದರು. ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಸಿನಿಮಾ ವಿಚಾರಕ್ಕೆ ಗದ್ದಲ ಶುರುವಾಯಿತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!
ಈ ಸಮಯದಲ್ಲಿ ಪರಿಷತ್ ನ ಕೆಲವು ಸದಸ್ಯರು ‘ಬಾಬೂ ಭಜರಂಗಿ’, ‘ಗುಜರಾತ್ ಫೈಲೂ’ ಮತ್ತಿತರ ಸಿನಿಮಾ ತೋರಿಸಿ ಎಂದು ಮತ್ತಷ್ಟು ಗದ್ದಲ ಹೆಚ್ಚಿಸಿದರು.