ಹೊಸಪೇಟೆಗೂ ಪುನೀತ್ ರಾಜ್ ಕುಮಾರ್ ಅವರಿಗೂ ಅವಿನಾಭಾವ ಸಂಬಂಧವಿದೆ. ಅಲ್ಲಿ ಅಪ್ಪುನನ್ನು ಪ್ರೀತಿಸುವವರಷ್ಟೇ ಅಲ್ಲ, ಆರಾಧಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಹಾಗಾಗಿಯೇ ಮೊನ್ನೆಯಷ್ಟೇ ಪುನೀತ್ ರಾಜ್ ಕುಮಾರ್ ಅವರ ಎತ್ತರದ ಪ್ರತಿಮೆಯನ್ನು ಹೊಸಪೇಟೆಯಲ್ಲಿ ಅನಾವರಣಗೊಳಿಸಲಾಯಿತು. ಲಕ್ಷ ಲಕ್ಷ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಈ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲು ಸಚಿವ ಆನಂದ್ ಸಿಂಗ್ ಕೂಡ ಕಾರಣರಾಗಿದ್ದರು.
ಪುನೀತ್ ರಾಜ್ ಕುಮಾರ್ ಹಂಪಿ ಸುತ್ತಮುತ್ತ ಶೂಟಿಂಗ್ ಗೆ ಬಂದರೆ, ಅವರು ಆನಂದ್ ಸಿಂಗ್ ಅವರನ್ನು ಭೇಟಿ ಆಗದೇ ಹೋಗುತ್ತಿರಲಿಲ್ಲವಂತೆ. ಹಾಗಾಗಿ ಆನಂದ್ ಸಿಂಗ್ ಅವರು ಅಪ್ಪುನನ್ನು ಕಂಡರೆ ಅಷ್ಟೊಂದು ಇಷ್ಟ ಪಡುತ್ತಾರೆ. ಈ ಪ್ರೀತಿಯ ನೆನಪಿಗಾಗಿಯೇ ಅವರು ತಮ್ಮ ಕಚೇರಿಯಲ್ಲಿ ಅಪ್ಪು ತೊಟ್ಟಿದ್ದ ಜಾಕೆಟ್ ಅನ್ನು ಫ್ರೇಮ್ ಹಾಕಿಸಿ ಇಟ್ಟಿದ್ದಾರೆ. ಈ ಜಾಕೆಟ್ ಅನ್ನು ಇವರಿಗೆ ಕೊಟ್ಟಿದ್ದು ಅಪ್ಪು ಅಭಿಮಾನಿ ಎನ್ನುವುದು ವಿಶೇಷ. ಇದನ್ನೂ ಓದಿ: ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ
ಹೊಸಪೇಟೆಯ ಕಿಚಡಿ ವಿಶ್ವ ಎಂಬ ಅಭಿಮಾನಿಗೆ ಪುನೀತ್ ರಾಜ್ ಕುಮಾರ್ ಅವರು ಅರಸು ಸಿನಿಮಾ ಮಾಡುವಾಗ ಜಾಕೆಟ್ ವೊಂದನ್ನು ನೀಡಿದ್ದರು. ಅದನ್ನು ಈವರೆಗೂ ಜತನದಿಂದ ಕಾಪಾಡಿಕೊಂಡು ಬಂದಿದ್ದರು ವಿಶ್ವ. ಇದೀಗ ಅದೇ ಜಾಕೆಟ್ ಅನ್ನು ಅವರು ಆನಂದ್ ಸಿಂಗ್ ಪುತ್ರನಿಗೆ ಉಡುಗೊರೆಯಾಗಿ ನೀಡಿದ್ದರಂತೆ. ಅದೇ ಜಾಕೆಟ್ ಇಂದು ಸಚಿವರ ಕಚೇರಿ ಸೇರಿದೆ. ಅಲ್ಲಿ ಅದಕ್ಕೊಂದು ಸ್ಥಾನ ಕಲ್ಪಿಸಲಾಗಿದೆ.