ಬಿಗ್ ಬಾಸ್ ಮನೆಯ ವಾಸ್ತು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಜನರ ಭವಿಷ್ಯ ಹೇಳುತ್ತಿದ್ದ ಆರ್ಯವರ್ಧನ್ ಗುರೂಜಿಯೇ ಮನೆ ಒಳಗೆ ಇದ್ದರೂ, ಮನೆಯ ವಾಸ್ತು ಯಾಕೋ ಸರಿ ಇಲ್ಲ ಅನಿಸುತ್ತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಕಾಮೆಂಟ್ ಬರುವುದಕ್ಕೆ ಕಾರಣ, ಸ್ಪರ್ಧಿಗಳು ಕೈ ಕಾಲು ಮುರಿದುಕೊಂಡು ಹೊರ ಬರುತ್ತಿದ್ದಾರೆ.
ಕಳೆದ ವಾರ ಕಾಮಿಡಿ ನಟ ಲೋಕೇಶ್ ಅವರು ಏಟು ಮಾಡಿಕೊಂಡ ಕಾರಣಕ್ಕಾಗಿ ಮನೆಯಿಂದ ಆಚೆ ಬಂದಿದ್ದರು. ಆಟ ಆಡುವ ಸಂದರ್ಭದಲ್ಲಿ ಅವರಿಗೆ ಬಲವಾದ ಏಟಾಗಿತ್ತು. ಹಾಗಾಗಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಮತ್ತೆ ಅವರು ವಾಪಸ್ಸು ಬಿಗ್ ಬಾಸ್ ಮನೆಗೆ ಹೋಗಿಲ್ಲ. ಆರೋಗ್ಯದ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಬಲ್ಲ ಮೂಲಗಳ ಪ್ರಕಾರ ಸದ್ಯ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ
ಎರಡನೇ ವಾರದಲ್ಲಿ ಮತ್ತೆ ಏಟು ಮಾಡಿಕೊಂಡಿದ್ದಾರೆ ಅರ್ಜುನ್ ರಮೇಶ್. ಈ ಹಿಂದೆ ಲೋಕೇಶ್ ಅವರಿಗೆ ಕಾಲಿಗೆ ಪೆಟ್ಟಾಗಿದ್ದರೆ, ಇವರಿಗೆ ಕೈ ಪೆಟ್ಟಾಗಿದೆ. ಅದೇ ನೋವಿನಲ್ಲೇ ಒಂದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಂಡಿದ್ದ ಅರ್ಜುನ್ ರಮೇಶ್ ಕೈ ನೋವು ವಾಸಿ ಆಗದೇ ಇರುವ ಕಾರಣಕ್ಕಾಗಿ ಈ ವಾರ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.
ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಸೋನು ಶ್ರೀನಿವಾಸ್ ಗೌಡ, ಸಾನ್ಯ ಐಯ್ಯರ್ ಕೂಡ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡು, ಆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಬಿಗ್ ಬಾಸ್ ಮನೆಯ ವಾಸ್ತುವನ್ನು ಒಂದು ಸಲ ಚೆಕ್ ಮಾಡಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಬರುವುದು ವಾಡಿಕೆ. ಆದರೆ, ಈ ಬಾರಿ ವಾರಕ್ಕೊಬ್ಬರು ಏಟು ಮಾಡಿಕೊಂಡು ಮನೆಯಿಂದ ಔಟ್ ಆಗುತ್ತಿದ್ದಾರೆ.