ಬೆಂಗಳೂರು: ರಕ್ತಹೀನತೆ (Anemia) ನಿವಾರಿಸುವುದನ್ನು ರಾಜ್ಯ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ತೋರಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಇಂದು (ಬುಧವಾರ) ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೀಮಿಯ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ಇಲ್ಲ. ರಕ್ತಹೀನತೆ ಕುರಿತು ನಮ್ಮ ಜನರು ಕಾಳಜಿ ವಹಿಸಿಲ್ಲ. ಜನಸಾಮಾನ್ಯರ ಉತ್ತಮ ಆರೋಗ್ಯ ದೃಷ್ಠಿಯಿಂದ ಈ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸುವ ಅಗತ್ಯತೆ ಇದ್ದು, ಸಿಎಂ ಸಿದ್ದರಾಮಯ್ಯ ಅವರು ಹೆಚ್ಚಿನ ಸಹಕಾರ ನೀಡಿದ್ದಾರೆ. ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಗೆ 185.74 ಕೋಟಿ ಅನುದಾನ ಒದಗಿಸಿದ್ದು, ಸಿದ್ದರಾಮಯ್ಯ ಅವರು ಅತ್ಯಂತ ಮುತುವರ್ಜಿ ವಹಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ರಸ್ತೆ ಅಗಲೀಕರಣ ಕಾಮಗಾರಿ ತ್ವರಿತಗೊಳಿಸಿ.. ಸಂಚಾರ ದಟ್ಟಣೆ ನಿವಾರಿಸಿ: ಡಿಸಿಎಂಗೆ ಲೆಹರ್ ಸಿಂಗ್ ಪತ್ರ
ಅನೀಮಿಯದಿಂದ ಗ್ರಹಿಕಾ ಶಕ್ತಿ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ. ಐದು ವರ್ಷದೊಳಗಿನ 65% ಮಕ್ಕಳು ಅನೀಮಿಯಾಗೆ ಒಳಗಾಗಿದ್ದಾರೆ. 15-49 ವಯಸ್ಸಿನ ಮಹಿಳೆಯರಲ್ಲಿ 47.8% ಅನೀಮಿಯ ಇದೆ. ಹಿಮೋಗ್ಲೋಬಿನ್ ಕಡಿಮೆಯಾದಾಗ ಅನೀಮಿಯ ಶುರುವಾಗುತ್ತೆ. ಇದಕ್ಕೆ ಪೌಷ್ಟಿಕಾಂಶದ ಕೊರತೆಯೇ ಮುಖ್ಯ ಕಾರಣ. ಕಬ್ಬಿಣಾಂಶ ಕೊರತೆಯಿಂದ ಹಿಮೋಗ್ಲೋಬಿನ್ ಕಡಿಮೆಯಾಗುತ್ತೆ. ಈ ಬಗ್ಗೆ ನಮ್ಮ ಜನರು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಇದರಿಂದ ನಮ್ಮ ದೈಹಿಕ, ಮಾನಸಿಕ ಬೆಳವಣಿಗೆ ಕಡಿಮೆಯಾಗುತ್ತೆ. ಸುಸ್ತು ಆಯಾಸದಿಂದ ಮಾನವನ ಶಕ್ತಿಯೇ ಕುಗ್ಗುತ್ತದೆ. ಹೀಗಾಗಿ ಅನೀಮಿಯ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.
ಅನೀಮಿಯಗೆ ಒಳಗಾದವರಿಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಚಿಕಿತ್ಸಾ ಔಷಧಿ ಪೂರೈಕೆ ಮಾಡುವುದರ ಜೊತೆಗೆ, ತಪಾಸಣೆಗೆ ಹೆಚ್ಚು ಒತ್ತು ನೀಡಲಾಗುವುದು. ಡಿಸೆಂಬರ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಅನೀಮಿಯ ಆರಂಭಿಸಲಿದ್ದೇವೆ. ಏಪ್ರಿಲ್ ಒಳಗೆ ಐದು ವರ್ಷದೊಳಗಿನ ಮಕ್ಕಳ ತಪಾಸಣೆ ಪೂರ್ಣಗೊಳಿಸಲಾಗುವುದು. 6-59 ತಿಂಗಳ 52 ಲಕ್ಷ ಮಕ್ಕಳು, 5-9 ವರ್ಷದೊಳಗಿನ 58 ಲಕ್ಷ ಮಕ್ಕಳು, 10-19 ವರ್ಷ ವಯಸ್ಸಿನ 127 ಲಕ್ಷ ಹದಿಹರೆಯದವರು, 12 ಲಕ್ಷ ಗರ್ಭಿಣಿಯರು, 11 ಲಕ್ಷ ಬಾಣಂತಿಯರು ಮತ್ತು ಸಂತಾನೋತ್ಪತ್ತಿ ವಯಸ್ಸಿನ 133 ಲಕ್ಷ ಮಹಿಳೆಯರನ್ನು ತಪಾಸಣೆ ಕಾರ್ಯ ಏಪ್ರಿಲ್ ತಿಂಗಳ ಒಳಗಾಗಿ ನಡೆಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ನ.25 ರಂದು ಬೆಂಗಳೂರಿಗೆ ಬರಲಿದ್ದಾರೆ ಮೋದಿ
ಒಟ್ಟು 6 ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಮೊದಲ ಹಂತದಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಗಾಗಿ ಸಾಮೂಹಿಕ ತಪಾಸಣೆ ನಡೆಸಲಾಗುವುದು. ಎರಡು ಮತ್ತು ಮೂರನೇ ಹಂತದಲ್ಲಿ ಮೇಲ್ವಿಚಾರಣೆ, ರಕ್ತ ಸಂವರ್ಧಿನಿ ಐಎಫ್ಎ ಪೂರಕ ಮತ್ತು ಜಂತುಹುಳು ನಿವಾರಣೆಯತ್ತ ಇಲಾಖೆ ಗಮನಹರಿಸಲಿದೆ. ನಾಲ್ಕನೇ ಹಂತದಲ್ಲಿ ಮನೆಗೆ ಪಡಿತರ ಮತ್ತು ಆಹಾರ ವಿತರಣೆ ಹಾಗೂ ಪೌಷ್ಟಿಕ ಅಭಿಯಾನ, ಸಮಾಲೋಚನೆ ಸೇವೆಗಳು, ಔಷಧಿ ವಿತರಣೆ, ಆರೋಗ್ಯ ಕೌಶಲ್ಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.