– ಗುತ್ತಿಗೆದಾರನನ್ನು ರಕ್ಷಿಸಲು ಕಾಂಗ್ರೆಸ್ನಿಂದ ದೂರು
ಬೆಂಗಳೂರು: ನಗರದಲ್ಲಿ ಯಾರೇ ಪ್ರತಿಭಟನೆ ಮಾಡಿದ್ದರೂ ಫ್ರೀಡಂ ಪಾರ್ಕ್ನಲ್ಲಿ (Freedom Park) ನಡೆಸಬೇಕು. ಹಾದಿ ಬೀದಿಯಲ್ಲಿ ಪ್ರತಿಭಟನೆ (Protest) ನಡೆಸಲು ಕಾಂಗ್ರೆಸ್ನವರಿಗೆ ಅನುಮತಿ ನೀಡಿದ್ದು ಯಾರು ಎಂದು ರಾಜಾಜಿನಗರ ಬಿಜೆಪಿ (BJP) ಶಾಸಕ ಸುರೇಶ್ ಕುಮಾರ್ (Suresh Kumar) ಪ್ರಶ್ನಿಸಿದ್ದಾರೆ.
ಇಂದಿನ ಕಾಂಗ್ರೆಸ್ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ಸೋಮವಾರ ನಾನು ಕ್ಷೇತ್ರ ಜನರೊಂದಿಗೆ ಮಾತನಾಡುತ್ತೇನೆ. ಈ ವೇಳೆ ಜನರು ಬಂದು ಹಲವು ಸಮಸ್ಯೆಗಳನ್ನು ಹೇಳುತ್ತಾರೆ. ಇಂದು 63ನೇ ಜನರೊಂದಿಗೆ ಜನಸೇವಕ ಕಾರ್ಯಕ್ರಮ ನಡೆಸುವಾಗ ಮುತ್ತಿಗೆ ಹಾಕಿದ್ದಾರೆ. ಆರೋಪ ಮಾಡುವುದು ಸರಿ. ಆದರೆ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದ್ದು ಎಷ್ಟು ಸರಿ ಎಂದು ಅವರು ಕೇಳಿದ್ದಾರೆ.
ನಾನು 300 ಕೋಟಿ ರೂ. ನಷ್ಟ ಮಾಡಿದ್ದೇನೆ ಎಂದು ನನ್ನ ವಿರುದ್ಧ ಕಾಂಗ್ರೆಸ್ ಕಾನೂನು ಘಟಕದಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ದೂರಿನ ಬಗ್ಗೆ ಇಲ್ಲಿಯವರೆಗೆ ವಿಚಾರಣೆಗೆ ಬರುವಂತೆ ಯಾವುದೇ ನೋಟಿಸ್ ಬಂದಿಲ್ಲ. ಈ ದೂರಿಗೆ ನಾನು ಉತ್ತರವನ್ನು ನೀಡುತ್ತೇನೆ. ಈ ದೂರಿನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಹೊರಗೆ ಬರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸುರೇಶ್ ಕುಮಾರ್ ವಿರುದ್ಧ 300 ಕೋಟಿ ಟೆಂಡರ್ ಗೋಲ್ಮಾಲ್ ಆರೋಪ – ʻಕೈʼ ಕಾರ್ಯಕರ್ತರಿಂದ ಶಾಸಕರ ಮುತ್ತಿಗೆಗೆ ಯತ್ನ
ಫ್ರೀಡಂ ಪಾರ್ಕ್ನಲ್ಲಿ ಅನುಮತಿ ಪಡೆದು ಪ್ರತಿಭಟನೆ ನಡೆಸಬೇಕು. ಈ ರೀತಿಯ ಪ್ರತಿಭಟನೆಗೆ ಗೃಹ ಸಚಿವರ ಪ್ರತಿಕ್ರಿಯೆ ಏನು? ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿದ್ದು ಹೇಗೆ? ಇದು ಮುಂದುವರೆದರೆ ನಾಳೆಯಿಂದ ನಾವು ಕೂಡ ಬೀದಿಗೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
