ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಬೆಳವಣಿಗೆಗಳು ನಡೆಯುತ್ತಿವೆ. ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ (AIADMK) ಈಗ ವಿಭಜನೆಯ ಅಂಚಿನಲ್ಲಿದ್ದು, ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಪಕ್ಷದೊಳಗೆ ಬಿರುಕು ಕಾಣಿಸಿಕೊಂಡಿದೆ.
108 ಸ್ಥಾನಗಳನ್ನು ಗೆದ್ದಿರುವ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಎಡಪ್ಪಾಡಿ ಪಳನಿಸ್ವಾಮಿ (EPS) ಬಣ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಈ ನಿರ್ಧಾರಕ್ಕೆ ಪಕ್ಷದ ಒಳಗೇ ಭಾರಿ ವಿರೋಧ ವ್ಯಕ್ತವಾಗಿದೆ. 47 ಸ್ಥಾನಗಳನ್ನು ಗೆದ್ದಿರುವ ಎಐಎಡಿಎಂಕೆಯ ಸುಮಾರು 36 ಶಾಸಕರು ಈಗ ಇಪಿಎಸ್ ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದು, ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ವಿಜಯ್ ಅವರಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಶನಿವಾರ ಇಪಿಎಸ್ ತಮ್ಮ ನಿವಾಸದಲ್ಲಿ ಶಾಸಕರ ಅಧಿಕೃತ ಸಭೆ ನಡೆಸಿದ ಬೆನ್ನಲ್ಲೇ, ಮಾಜಿ ಸಚಿವ ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದಲ್ಲಿ 36 ಶಾಸಕರು ರಹಸ್ಯ ಸಭೆ ನಡೆಸಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿಯೇ ಪಕ್ಷದ ಸೋಲಿಗೆ ಕಾರಣ ಎಂಬ ಅಭಿಪ್ರಾಯ ಈ ಬಂಡಾಯ ಬಣದಲ್ಲಿದೆ. ಹೀಗಾಗಿ ಎನ್ಡಿಎ ಮೈತ್ರಿಯಿಂದ ಹೊರಬಂದು ಟಿವಿಕೆಗೆ ಬೆಂಬಲ ನೀಡಲು ಈ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: The Love Is Always Louder – ಪ್ರೀತಿ ಪಾಠ ಮಾಡಿದ ನಟಿ ತ್ರಿಶಾ

ಶಾಸಕಾಂಗ ಪಕ್ಷದ ನಾಯಕನ (Legislature Party Leader) ಆಯ್ಕೆಯ ವಿಚಾರದಲ್ಲಿ ಇಪಿಎಸ್ ಬೆಂಬಲಿಗರು ಮತ್ತು ಬಂಡಾಯ ಬಣದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಭಿನ್ನಮತದ ಕಾರಣದಿಂದಲೇ ನಾಯಕನ ಆಯ್ಕೆ ಇನ್ನೂ ಅಧಿಕೃತವಾಗಿಲ್ಲ.
ಶಾಸಕರು ಕೈತಪ್ಪಿ ಹೋಗುವುದನ್ನು ತಡೆಯಲು ಸುಮಾರು 40 ಶಾಸಕರನ್ನು ಪುದುಚೇರಿಯ ರೆಸಾರ್ಟ್ನಲ್ಲಿ ಇರಿಸಲಾಗಿತ್ತು. ಮೇ 9 ರಂದು ಅವರು ಚೆನ್ನೈಗೆ ಮರಳಿ ಇಪಿಎಸ್ ಅವರನ್ನು ಭೇಟಿ ಮಾಡಿದ್ದರೂ, ಅಸಮಾಧಾನ ಮಾತ್ರ ಶಮನಗೊಂಡಿಲ್ಲ. ಇದನ್ನೂ ಓದಿ: ಭವಿಷ್ಯದಲ್ಲಿ INDIA ಒಕ್ಕೂಟವನ್ನು ವಿಜಯ್ ಸೇರಬಹುದು: ಚಿದಂಬರಂ

