ಬೆಂಗಳೂರು: ಅಕ್ರಮವಾಗಿ ಅತಿಪ್ರವೇಶ ಮಾಡಿ ಅಥವಾ ಬಡವರು ಕೈಲಾಗದವರ ಮೇಲೆ ದಬ್ಬಾಳಿಕೆ ಮಾಡಿ ಬಲಾಢ್ಯರು ಖಾಲಿ ನಿವೇಶನಗಳಿಗೆ ಬೇಲಿ ಹಾಕೋದನ್ನ ನೋಡಿದ್ದೇವೆ. ಆದರೆ ಇಲ್ಲಿ ಸ್ವಾಮೀಜಿಯೊಬ್ಬರಿಂದ ಪೊಲೀಸ್ ಠಾಣೆಗೆ ಬೇಲಿ ಬಿದ್ದಿದ್ದೆ.
ಬೆಂಗಳೂರು ಹೊರವಲಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ಜಾಗ ಮಠದ ಸ್ವತ್ತು ಎಂದು ಬೇಲಿ ಮಠದ ಶಿವರುದ್ರಸ್ವಾಮೀಜಿ ಕಾಂಪೌಂಡ್ ಹಾಕಿಸಲು ಮುಂದಾಗಿದ್ದಾರೆ. ಸಂಚಾರಿ ಠಾಣೆಗೆ ಸ್ವಂತ ಜಾಗ ಇಲ್ಲದ ಕಾರಣ ಕಳೆದ ಮೂರು ವರ್ಷಗಳ ಹಿಂದೆ ಬೇಲಿ ಮಠದ ಜಾಗವನ್ನು ಪಡೆದಿದ್ದರು. ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಜಾಗವನ್ನು ಸ್ವಚ್ಛಗೊಳಿಸಿ ಠಾಣೆಗೆ ಉಪಯೋಗಿಸಿಕೊಳ್ಳುತ್ತಿದ್ದರು. ಆದರೆ ಈಗ ಏಕಾಏಕಿ ಮಠದ ಕಡೆಯವರು ಠಾಣೆ ಜಾಗ ಖಾಲಿ ಮಾಡುವಂತೆ ಹೇಳಿ ಮಠದ ಜಾಗಕ್ಕೆ ಬೇಲಿ ಹಾಕುತ್ತಿದ್ದಾರೆ ಎಂದು ಸ್ಥಳೀಯ ಕುಮಾರ್ ಹೇಳಿದ್ದಾರೆ.
ಮಠದವರೇ ಕಳೆದ ಮೂರು ವರ್ಷಗಳ ಹಿಂದೆ ಜಾಗವನ್ನು ಪೊಲೀಸ್ ಠಾಣೆಯ ಉಪಯೋಗಕ್ಕಾಗಿ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಸ್ವಾಮೀಜಿ ಸಹ ಪೊಲೀಸ್ ಇಲಾಖೆಯಿಂದ ಬಾಡಿಗೆ ಸಹ ಪಡೆದಿರಲಿಲ್ಲ. ಆದರೆ ಇದೀಗ ಜಾಗ ಖಾಲಿ ಮಾಡಿ ಎಂದು ಸೂಚನೆ ನೀಡಿದ್ದಾರೆ. ಇದರಿಂದಾಗಿ ಪೊಲೀಸ್ ಠಾಣೆಗೆ ಬೇಲಿ ಮಠದ ಸ್ವಾಮೀಜಿ ಬೇಲಿ ಹಾಕಿದಂತಾಗಿದೆ. ಸ್ವಾಮೀಜಿಯವರು ಕಾಲಾವಕಾಶ ನೀಡಿದರೆ ಚೆನ್ನಾಗಿತ್ತು, ಇದರಿಂದಾಗಿ ಪೊಲೀಸ್ ಇಲಾಖೆಯ ಮಾನ ಹೋಗಿದ್ದು, ಸಾರ್ವಜನಿಕರಿಗೂ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಎರಡು ರಾಷ್ಟ್ರೀಯ ಹೆದ್ದಾರಿ ಸಂದಿಸುವ ಜಾಗದಲ್ಲಿ ಈ ಸಂಚಾರಿ ಪೊಲೀಸ್ ಠಾಣೆ ಇದ್ದೂ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಜಾಗ ಗುರುತಿಸಿಕೊಂಡು ಪೊಲೀಸ್ ಠಾಣೆಗೆ ಒಂದು ವ್ಯವಸ್ಥೆ ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv