ಮಂಗಳೂರು: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿಯಾಗಿದ್ದು, ರಾಜಕಾರಣಕ್ಕಾಗಿ ಆತನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಜಲೀಲ್ ಸಹೋದರ ಮಹಮ್ಮದ್ ಆರೋಪಿಸಿದರು.
ಆಸ್ಪತ್ರೆ ಬಳಿ ಮಾತನಾಡಿದ ಅವರು, ನಾವು ಮನೆಯಲ್ಲಿ ಇದ್ದ ವೇಳೆ ಜಲೀಲ್ ಕೊಲೆಯಾಗಿದೆ. ಆದರೆ ಅವನು ಯಾವುದೇ ಗಲಾಟೆಗೆ ಹೋಗದ ಬಡಪಾಯಿಯಾಗಿದ್ದು, ಬೆಳಿಗ್ಗೆ ಅಂಗಡಿಗೆ ಬಂದು ವ್ಯವಹಾರ ಮಾಡಿ ರಾತ್ರಿ ಮನೆಗೆ ಹೋಗುತ್ತಿದ್ದ. ಆತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರಿಗೂ ಬೇಕಾದವನಾಗಿದ್ದ. ಯಾವುದೇ ಚಟುವಟಿಕೆಗೆ ಹೋಗದ ಆತ ಶಾಂತಿಪ್ರಿಯನಾಗಿದ್ದ. ಯಾರ ಜೊತೆಗೂ ಜೋರಾಗಿಯೂ ಮಾತನಾಡದಂತ ಅವನನ್ನೇ ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
- Advertisement 2
- Advertisement 3
ಇಬ್ಬರು ಬೈಕ್ನಲ್ಲಿ ಬಂದು ಜಲೀಲ್ನನ್ನು ಕೊಲೆ ಮಾಡಿ ಹೋಗಿದ್ದಾರೆ. ಅವನು ಪತ್ನಿ ಮತ್ತು ಮಗನ ಜೊತೆ ಮನೆಯಲ್ಲಿ ವಾಸವಾಗಿದ್ದ. ಕಾಟಿಪಳ್ಳ ನಾಲ್ಕನೇ ಬ್ಲಾಕ್ನಲ್ಲಿ ಅವನ ಮನೆ ಇತ್ತು. ಆದರೆ ಅವನು ಯಾವುದೇ ಸಂಘಟನೆ, ರಾಜಕೀಯದಲ್ಲಿ ಇರಲಿಲ್ಲ. ಸುಮಾರು 10-15 ವರ್ಷದಿಂದ ಅವನು ಅಲ್ಲಿ ಅಂಗಡಿ ನಡೆಸ್ತಾ ಇದ್ದ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸುರತ್ಕಲ್ ಬಳಿ ಚಾಕು ಇರಿದು ವ್ಯಕ್ತಿ ಕೊಲೆ – 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
- Advertisement 4
ಅವನಿಗೆ ಶತ್ರುಗಳು ಅಂತ ಯಾರೂ ಇರಲೇ ಇಲ್ಲ. ಇದು ರಾಜಕಾರಣಕ್ಕಾಗಿ ಅಮಾಯಕನ ಕೊಲೆಯಾಗಿದೆ. ನಮಗೆ ಸರ್ಕಾರ ನ್ಯಾಯ ಕೊಡಬೇಕು, ನೈಜ ಆರೋಪಿ ಬಂಧಿಸಬೇಕು. ಯಾರ್ಯಾರನ್ನೋ ಹಿಡಿಯೋ ಅಗತ್ಯವಿಲ್ಲ, ನೈಜ ಆರೋಪಿಗಳನ್ನು ಹಿಡಿಯಿರಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೈ ನಾಯಕ ಅಲ್ತಾಫ್ ಖಾನ್ ಮನೆ ಬಳಿ ಹೊಂಚು ಹಾಕಿದ್ದ ಮೂವರು ವಶಕ್ಕೆ
ಘಟನೆಯೇನು?: ಇಬ್ಬರು ದುಷ್ಕರ್ಮಿಗಳು ಜಲೀಲ್(40) ಅವರ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಶನಿವಾರ ಸಂಜೆ ಜಲೀಲ್(Jaleel) ಅಂಗಡಿಯಲ್ಲಿ ಕುಳಿತಿದ್ದಾಗ ಅಂಗಡಿಯ ಪಕ್ಕದ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು ಇಟ್ಟು ಏಕಾಏಕಿ ಚೂರಿ ಇರಿದು ಪರಾರಿಯಾಗಿದ್ದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್ ಅವರ ಎದೆಯ ಭಾಗ ಮತ್ತು ಬೆನ್ನಿಗೆ ಹರಿತವಾದ ಚೂರಿಯಿಂದ ಇರಿದಿದ್ದು, ಅವರ ಬೆನ್ನಿನಲ್ಲಿದ್ದ ಚೂರಿಯನ್ನು ತೆಗೆದ ಫಾರೂಕ್ ಅವರು ತಕ್ಷಣ ಕಾರಿನಲ್ಲಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಜಲೀಲ್ ಮೃತಪಟ್ಟಿದ್ದಾರೆ.