– ಓಲೈಕೆಯ ರಾಜಕಾರಣಕ್ಕೆ 2028ರಲ್ಲಿ ಈ ಸರ್ಕಾರ ಬಲಿಯಾಗುತ್ತೆ ಎಂದ ಬಿಜೆಪಿ ಶಾಸಕ
ಉಡುಪಿ: ಹಿಜಬ್ (Hijab Row) ಮೂಲಕ ಶಾಲಾ ಮಕ್ಕಳಲ್ಲಿ ದ್ವೇಷ ಹಾಗೂ ಭೇದಭಾವ ಉಂಟುಮಾಡುವ ಕೆಲಸ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುನೀಲ್ ಕುಮಾರ್ (Sunil Kumar) ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಓಲೈಕೆಯ ಪರಮಾವಧಿಯ ಕೊಡ ತುಂಬಿದೆ. ಶಿಶುಪಾಲನ ಪಾಪದ ಕೊಡ ತುಂಬಿದಾಗ ಏನಾಯ್ತು ಎಂಬ ಬಗ್ಗೆ ಪುರಾಣಗಳಲ್ಲಿ ಕೇಳಿದ್ದೇವೆ. ಓಲೈಕೆಯ ರಾಜಕಾರಣಕ್ಕೆ 2028ರಲ್ಲಿ ಈ ಸರ್ಕಾರ ಬಲಿಯಾಗುತ್ತೆ. ಟಿಪ್ಪು ಜಯಂತಿ, ವಕ್ಫ್ ಆಸ್ತಿ, ಅಲ್ಪಸಂಖ್ಯಾತರ ಓಲೈಕೆಗೆ ಅನುದಾನ ಮಂಜೂರಾತಿ ಈಗ ಹಿಜಬ್. ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಇಲ್ಲ, ಶಿಕ್ಷಕರ ನೇಮಕಾತಿ ಇಲ್ಲ, ಸೈಕಲ್ ಸಾಕ್ಸ್ ಕೊಡದ ಸರ್ಕಾರ ಈಗ ಹಿಜಾಬ್ ತರಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರಕ್ಕೆ ಮುಖ್ಯಮಂತ್ರಿಗಳಿಗೆ ಆದ್ಯತೆ ಆದ್ರೂ ಏನು? ಶಿಕ್ಷಕರ ನೇಮಕಾತಿ, ಪಠ್ಯಪುಸ್ತಕ ಕೊಡುವುದು ಆದ್ಯತೆ ಆಗಬೇಕಿತ್ತು. ಆದರೆ, ಹಿಜಬ್ ಸರ್ಕಾರದ ಆದ್ಯತೆ ಆಗಿದೆ. ಇದು ಎಷ್ಟು ದೊಡ್ಡ ಪ್ರಮಾಣದ ಓಲೈಕೆ ಪರಮಾವಧಿ ಎನ್ನುವುದು ಅರಿವಾಗುತ್ತೆ. ರಾಜ್ಯ ಶಿಕ್ಷಣದ ನೀತಿ ಜಾರಿಗೆ ತರುವುದಾಗಿ 2023 ರಲ್ಲೇ ಘೋಷಣೆ ಮಾಡಿತ್ತು ಸರ್ಕಾರ. ಎನ್ಇಪಿ ಕ್ಯಾನ್ಸಲ್ ಮಾಡಿ ಎಸ್ಇಪಿ ಮೂರು ವರ್ಷ ಆದ್ರೂ ಜಾರಿಮಾಡಿಲ್ಲ. ಸರ್ಕಾರಕ್ಕೆ ಶಿಕ್ಷಣ ಇಲಾಖೆ ಇದ್ಯಾವುದರ ಬಗ್ಗೆ ಆಸಕ್ತಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಹಿಜಬ್ ಮೂಲಕ ಶಾಲಾ ಮಕ್ಕಳಲ್ಲಿ ದ್ವೇಷ ಹಾಗೂ ಭೇದಭಾವ ಉಂಟುಮಾಡುವ ಕೆಲಸ ಆಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಂದ್ರೆ ಒಡೆದು ಆಳುವ ನೀತಿ. ಜಿಲ್ಲೆ, ಪ್ರಾಂತ್ಯ, ಜಾತಿ ಈಗ ಶಾಲಾ ಮಕ್ಕಳ ಮನಸನ್ನು ಒಡೆಯುವ ಕೆಲಸ ಆಗ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ, ಯುದ್ಧ ಇಲ್ಲದ ಸಂದರ್ಬದಲ್ಲಿ ಬೆಲೆ ಏರಿಕೆ ಆಗಿಲ್ಲ. ಸಿದ್ದರಾಮಯ್ಯ ಸರ್ಕಾರ ಮೂರು ರೂಪಾಯಿ ಹೆಚ್ಚಳ ಮಾಡಿದಾಗ ಬಿಕ್ಕಟ್ಟು ಇತ್ತಾ? ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಕಾರಣಕ್ಕೆ ಡೀಸೆಲ್ ಹಾಗೂ ಪೆಟ್ರೋಲ್ ಮೇಲೆ ಮೂರರಿಂದ ಐದು ರೂಪಾಯಿ ಹೆಚ್ಚಳ ಆಗಿತ್ತು. ಈಗ ಯುದ್ಧದ ವೇಳೆ ಜಗತ್ತಿಗೆ ಕರಾಳತೆ ಎದುರಾಗಿದೆ. ಯುದ್ಧದ ಪರಿಸ್ಥಿತಿ ಕಡಿಮೆಯಾದರೆ ಬೆಲೆ ಕೂಡ ಕಡಿಮೆಯಾಗುತ್ತೆ. ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಬಹಳ ಅಂತಾರಾಷ್ಟ್ರೀಯ ಸಂಬಂಧ ಇದ್ದರೆ ಟ್ರಂಪ್ ಜೊತೆ ಮಾತುಕತೆ ನಡೆಸಲಿ. ಇರಾನ್ ಟ್ರಂಪ್ ಜೊತೆ ಮಾತುಕತೆ ನಡೆಸಿ ಯುದ್ಧ ನಿಲ್ಲಿಸಲಿ ಎಂದು ಆಶಿಸಿದರು.

