ಕಿಚ್ಚ ಸುದೀಪ್ (Kiccha Sudeep) ಹಲವು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಪರವಾಗಿ ಮತ್ತು ಅವರು ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಬೊಮ್ಮಾಯಿ ಮಾಮಾ ತಮಗೆ ಈ ಹಿಂದೆ ಮಾಡಿದ ಸಹಾಯಕ್ಕಾಗಿ ಅವರ ಪರ ಅಖಾಡಕ್ಕೆ ಇಳಿಯುತ್ತಿರುವುದಾಗಿ ಸ್ಪಷ್ಟ ಪಡಿಸಿದ್ದರು. ತಾವು ಮಾತು ಕೊಟ್ಟಂತೆ ನಾಳೆಯಿಂದ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲಿದ್ದಾರಂತೆ.
ನಾಳೆ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ (Shiggavi) ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಕಾರ್ಯದಲ್ಲೂ ಸುದೀಪ್ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಇಂದಿನಿಂದ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿಯಬೇಕಿತ್ತು. ಕಾರ್ಯಕ್ರಮ ಸರಿಯಾದ ರೀತಿಯಲ್ಲಿ ನಿಗದಿ ಆಗದೇ ಇರುವ ಕಾರಣದಿಂದಾಗಿ ನಾಳೆಯಿಂದ ಅವರು ಶಿಗ್ಗಾಂವಿಯಿಂದಲೇ ಪ್ರಚಾರದ ಕಾರ್ಯವನ್ನು ಶುರು ಮಾಡಲಿದ್ದಾರಂತೆ. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್ಸಿಬಿ
ಸದ್ಯ ಬೊಮ್ಮಾಯಿ ಪರವಾಗಿ ಪ್ರಚಾರಕ್ಕೆ ಹೋಗುವ ಕಿಚ್ಚ ಮುಂದಿನ ದಿನಗಳಲ್ಲಿ ಯಾರೆಲ್ಲ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಬೊಮ್ಮಾಯಿ ಸೂಚಿಸುವ ಅಭ್ಯರ್ಥಿಗಳ ಪರವಾಗಿ ಕಿಚ್ಚ ಪ್ರಚಾರ ಮಾಡಲಿದ್ದಾರೆ. ಅದರಲ್ಲೂ ಸುದೀಪ್ ಅವರ ಆತ್ಮೀಯರ ಪರವಾಗಿಯೇ ಅವರು ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿಗ್ಗಾಂವಿಗೆ ಹೋಗುವುದಕ್ಕಾಗಿ ನಾಳೆ ಹೆಲಿಕಾಪ್ಟರ್ ಸಿದ್ಧವಾಗಿದೆ ಎನ್ನುವ ಮಾಹಿತಿ ಇದ್ದು, ಬೆಂಗಳೂರಿನಿಂದ ಅವರು ನೇರವಾಗಿ ಶಿಗ್ಗಾಂವಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ರೋಡ್ ಶೋನಲ್ಲಿ ಕಿಚ್ಚ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ.