ಚಾಮರಾಜನಗರ: ಮಹದೇಶ್ವರನ ಹುಂಡಿಯಲ್ಲಿ 1.70 ಕೋಟಿ ರೂಪಾಯಿಗೂ ಹೆಚ್ಚು ನಗದು ಹಣ ಸಂಗ್ರಹವಾಗಿದೆ. ಈ ಮೂಲಕ ಮಲೆಮಹದೇಶ್ವರ ಕೋಟ್ಯಾಧೀಶನಾಗಿದ್ದಾನೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಹುಂಡಿ ಎಣಿಕೆಯ ಬಳಿಕ ಮಹದೇಶ್ವರನಿಗೆ 1,70,65,814 ರೂಪಾಯಿ ಸಂಗ್ರಹವಾಗಿದೆ. ನಗದು ಹಣದ ಪೈಕಿ 9 ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಭಕ್ತರು ಕಾಣಿಕೆ ಸಲ್ಲಿಸಿದ್ದಾರೆ. ನಗದು ಜೊತೆಗೆ 80 ಗ್ರಾಂ ಚಿನ್ನ, 1 ಕೆ.ಜಿ 400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ – ಕೇರಳದ ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡ ಸೋಂಕು
ಹಣ ಕದ್ದು ಸಿಕ್ಕಿಬಿದ್ದ:
ಹುಂಡಿ ಎಣಿಕೆಯಲ್ಲಿ 40 ಸಾವಿರ ರೂಪಾಯಿ ಕಳವು ಮಾಡಿದ್ದ ಆರೋಪದಡಿ ಗುತ್ತಿಗೆ ಆಧಾರಿತ ನೌಕರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಗುತ್ತಿಗೆ ಆಧಾರಿತ ಡಿ ಗ್ರೂಪ್ ನೌಕರ ಪುದೂರು ಗ್ರಾಮದ ಪನೀರ್ ಸೆಲ್ವಂ ಬಂಧಿತ ಆರೋಪಿ. ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಸಮೀಪವಿರುವ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿವಿಧ ವಿಭಾಗದ ನೌಕರರು ಭಾಗವಹಿಸಿದ್ದರು. ಇದರಲ್ಲಿ ಪನೀರ್ ಸೆಲ್ವಂ ಕೂಡ ಭಾಗಿಯಾಗಿದ್ದನು. ಈ ವೇಳೆ ಆತನ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿತ್ತು. ಇದರಿಂದ ಅನುಮಾನಗೊಂಡ ಪ್ರಾಧಿಕಾರದ ಅಧಿಕಾರಿಗಳು, ನೌಕರರು ಈತನನ್ನು ಪರಿಶೀಲಿಸಿದಾಗ ಜೇಬಿನಲ್ಲಿ 500 ರೂಪಾಯಿ ಮುಖಬೆಲೆಯ 80 ನೋಟುಗಳು ಕಂಡು ಬಂದವು. ಈ ಹಿನ್ನಲೆ ಪ್ರಾಧಿಕಾರದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದನ್ನೂ ಓದಿ: ಬೆಂಗಳೂರು ಜನರಿಗೆ ಗುಡ್ ನ್ಯೂಸ್ – ಇನ್ಮುಂದೆ ಉದ್ಯಾನಗಳು ರಾತ್ರಿ 8ರ ವರೆಗೂ ಓಪನ್