– ವಾಂಗ್ಚುಕ್ 11 ಕೆಜಿ ತೂಕ ಕಳೆದುಕೊಂಡಿದ್ದಾರೆ, ತಕ್ಷಣವೇ ಟೀಕಿಸಬೇಡಿ: ಪತ್ನಿ ಮನವಿ
ನವದೆಹಲಿ: 26 ದಿನಗಳ ಕಾಲ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ (Hunger Strike) ನಡೆಸಿದ ಬಳಿಕ ಅದನ್ನು ಅಂತ್ಯಗೊಳಿಸಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ (Sonam Wangchuk) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
AFTER 26 DAYS OF HUNGER DO I NEED TO PROVE MY SINCERITY !!!
Do please watch and help spread the word. Find the full 22 minutes video on my YouTube Channel: Sonam Wangchuk pic.twitter.com/6CO3tjZsSD— Sonam Wangchuk (@Wangchuk66) July 24, 2026
ಕೇಂದ್ರ ಸರ್ಕಾರದೊಂದಿಗೆ (Central Govt) ಯಾವುದೇ `ಒಪ್ಪಂದ’ ಮಾಡಿಕೊಂಡು ಉಪವಾಸ ಕೈಬಿಟ್ಟಿಲ್ಲ ಎಂದು ಸೋನಂ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ವಾಂಗ್ಚುಕ್, ತಮ್ಮ ಉಪವಾಸ ಅಂತ್ಯವನ್ನು ರಾಜಕೀಯ ಊಹಾಪೋಹಗಳ ಮೂಲಕ ಅರ್ಥೈಸಬಾರದು ಎಂದರಲ್ಲದೇ, ಸರ್ಕಾರದೊಂದಿಗೆ ಡೀಲ್ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ನನಗೆ ನಿರಾಸೆ ಉಂಟು ಮಾಡಿವೆ ಎಂದು ಹೇಳಿದ್ದಾರೆ.

ʻ26 ದಿನಗಳ ಉಪವಾಸದ ಬಳಿಕವೂ ನನ್ನ ಪ್ರಾಮಾಣಿಕತೆಯನ್ನ ಸಾಬೀತುಪಡಿಸಬೇಕೇ?ʼ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ತಮ್ಮ 22 ನಿಮಿಷಗಳ ಸಂಪೂರ್ಣ ವಿಡಿಯೊವನ್ನು ವೀಕ್ಷಿಸಿ ನಂತರವೇ ಅಭಿಪ್ರಾಯ ರೂಪಿಸಬೇಕೆಂದು ಜನರಿಗೆ ಮನವಿ ಮಾಡಿದ್ದಾರೆ. ತಮ್ಮ ಸಂದೇಶವನ್ನು ಹೆಚ್ಚು ಜನರಿಗೆ ತಲುಪಿಸುವಂತೆ ಸಹ ಕೋರಿದ್ದಾರೆ.
ಟೀಕಾಕಾರರಿಗೆ ವಾಂಗ್ಚುಕ್ ತಿರುಗೇಟು
ಯಾರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ ವಾಂಗ್ಚುಕ್, ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ತಾವು 26 ದಿನಗಳ ಕಾಲ ಮಾಡಿದ ವೈಯಕ್ತಿಕ ತ್ಯಾಗವನ್ನು ಕಡೆಗಣಿಸುತ್ತಿವೆ. ತಮ್ಮ ಪ್ರಮುಖ ಬೇಡಿಕೆಗಳಲ್ಲಿ ಹಲವು ವಿಷಯಗಳಿಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಭರವಸೆ ದೊರೆತ ಹಿನ್ನೆಲೆಯಲ್ಲಿ ಉಪವಾಸವನ್ನು ಕೊನೆಗೊಳಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪತ್ನಿಯ ಭಾವನಾತ್ಮಕ ಮನವಿ
ಈ ನಡುವೆ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ (Gitanjali J. Angmo) ಕೂಡ ಸಾರ್ವಜನಿಕರಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ. ವಾಂಗ್ಚುಕ್ ಅವರ ನಿರ್ಧಾರವನ್ನು ತಕ್ಷಣವೇ ಟೀಕಿಸಬೇಡಿ ಎಂದು ಅವರು ಹೇಳಿದ್ದಾರೆ.

ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೀತಾಂಜಲಿ, 26 ದಿನಗಳ ಉಪವಾಸದ ಪರಿಣಾಮ ವಾಂಗ್ಚುಕ್ 11 ಕೆಜಿ ತೂಕ ಕಳೆದುಕೊಂಡಿದ್ದು, ಸ್ನಾಯುಗಳೂ ಕ್ಷೀಣಿಸಿವೆ ಎಂದು ತಿಳಿಸಿದ್ದಾರೆ. ಅವರ ಆರೋಗ್ಯ ಹದಗೆಟ್ಟ ಕಾರಣ ಅವರನ್ನ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ. 26 ದಿನಗಳ ಕಾಲ ದೊಡ್ಡ ಉದ್ದೇಶಕ್ಕಾಗಿ ಉಪವಾಸ ಮಾಡಿದ ವ್ಯಕ್ತಿಯನ್ನು ಟೀಕಿಸುವ ಮೊದಲು, ಅಷ್ಟೊಂದು ತ್ಯಾಗ ಮಾಡುವ ಧೈರ್ಯ ನಿಮ್ಮಲ್ಲಿದೆಯೇ ಎಂಬುದನ್ನು ಯೋಚಿಸಿ ಎಂದು ಅವರು ಬರೆದಿದ್ದಾರೆ.
ವಾಂಕ್ಚುಕ್ ಅವರು ಇಂದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನಿಷ್ಠ ಒಂದು ದಿನವಾದರೂ ಅವರಿಗೆ ಕರುಣೆ ತೋರಿಸಿ. ನಮ್ಮ ನಿರೀಕ್ಷೆಗಳು ಮತ್ತು ರಾಜಕೀಯ ಲೆಕ್ಕಾಚಾರಗಳನ್ನು ಅವರ ಮೇಲೆ ಹೊರಿಸಬೇಡಿ ಎಂದು ಮನವಿ ಮಾಡಿದ್ದಾರೆ.
