ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಒಮ್ಮೊಮ್ಮೆ ತಪ್ಪು ಮಾಡುತ್ತಾರೆ ಎಂದು ಕಳೆದ ಬಾರಿ ದೇವರಾಜು ಅವರಿಗೆ ಪಕ್ಷದಿಂದ ಟಿಕೆಟ್ ಕೊಡದಿದ್ದಕ್ಕೆ ಮಾಜಿ ಸಚಿವ ಎಚ್.ಡಿ ರೇವಣ್ಣ ಬೇಸರ ವ್ಯಕ್ತಪಡಿಸಿದರು.
ಕೆ.ಆರ್ ಪೇಟೆ ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಾಗೂ ಬಿಜೆಪಿ ಸರ್ಕಾರ ವಿರುದ್ಧ ಹರಿಹಾಯ್ದರು. ಹಾಗೆಯೇ ಕಳೆದ ಬಾರಿ ನಾರಾಯಣಗೌಡರಿಗೆ ಜೆಡಿಎಸ್ ಟಿಕೆಟ್ ಕೊಟ್ಟು ದೇವರಾಜು ಅವರನ್ನು ಕೈಬಿಟ್ಟಿದ್ದಕ್ಕೆ ಕುಮಾರಸ್ವಾಮಿ ಕೂಡ ಒಮ್ಮೊಮ್ಮೆ ತಪ್ಪು ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ಬಾರಿ ದೇವರಾಜುವಿಗೆ ಟಿಕೆಟ್ ಕೊಡಲು ದೇವೇಗೌಡರು ಬಿ ಫಾರ್ಮ್ ನೀಡಿ ಆಗಿತ್ತು ಎಂದು ತಿಳಿಸಿದರು.
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಹೋಗಬೇಕು. ಜನಪರ ಸರ್ಕಾರ ಬರಬೇಕು. ಕುಮಾರಸ್ವಾಮಿ ಅವಧಿಯ ಕೆಲಸವನ್ನು ತಡೆದು ಬಿಜೆಪಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಎಂದೂ ರಾಜ್ಯ ಸರ್ಕಾರದ ಪರವಾಗಿ ಮತನಾಡಿಲ್ಲ. ಎ ಟೀಂ, ಬಿ ಟೀಂ ಎಂದು ಹೇಳಿದ್ದರು. ಎ ಟೀಂ ಎಂದರೆ ಬಿಜೆಪಿ, ಬಿ ಎಂದರೆ ಜೆಡಿಎಸ್ ಎಂದರ್ಥ. ಬಿ ಟೀಂ ಇಲ್ಲ ಅಂದಿದ್ದರೆ ಬಿಜೆಪಿಯವರು 100 ಸೀಟು ದಾಟಲೂ ಆಗುತ್ತಿರಲಿಲ್ಲ. ಸರ್ಕಾರ ಬಂದ ಮೇಲೆ ಅವರೇ ಬಂದು ನಮ್ಮನ್ನ ಅಪ್ಪಿಕೊಂಡರು. ನಮಗೆ ಎ ಟೀಂ ಬೇಡ, ಸಿ ಟೀಂ ಸಹ ಬೇಡ. ಎರಡೂ ಪಕ್ಷದಿಂದ ದೂರವಿರುತ್ತೇವೆ. ನಾವು ರಾಜ್ಯದಲ್ಲಿ ಜನಪರ ಕೆಲಸ ಮಾಡುತ್ತೇವೆ ಎಂದರು.
ನಾರಾಯಣಗೌಡಗೆ ಅನುದಾನ ಎಂದರೆ ಏನು ಗೊತ್ತು? ಅವರು ಪಕ್ಷಕ್ಕೆ, ಜನಕ್ಕೆ ಮೋಸ ಮಾಡಿದವನು. ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾನೋ ಗೊತ್ತಿಲ್ಲ ಎಂದು ಟೀಕಿಸಿದರು.
ಮನೆಗೆ ಹೋದರೆ ನನ್ನನ್ನು ಚಪ್ಪಲಿ ಬಿಡುವ ಜಾಗದಲ್ಲಿ ನಿಲ್ಲುಸುತ್ತಿದ್ದರು ಎಂಬ ನಾರಾಯಣಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೆಲ್ಲಾ ವ್ಯಾಪಾರ ಮಾಡುವವರು. 5 ವರ್ಷ ನಮ್ಮ ಸರ್ಕಾರವಿದ್ದರೆ ಚಪ್ಪಲಿ ಬಿಟ್ಟು ಬರುತ್ತಿದ್ದನಾ? ಜೆಡಿಎಸ್ನಿಂದ ಆತ ಶಾಸಕನಾಗಿದ್ದು, ಆತ ಎರಡನೇ ಬಾರಿಗೆ ಶಾಸಕನಾಗಲು ಚಪ್ಪಲಿ ಬಿಟ್ಟು ಮನೆ ಒಳಗೆ ಬರ್ತಿದ್ನಾ ಎಂದು ಪ್ರಶ್ನಿಸಿ ತಿರುಗೇಟು ಕೊಟ್ಟರು. ಬಳಿಕ ನಾವು ಬಿಜೆಪಿಗೆ ಬೆಂಬಲಿಸುತ್ತೇವೆ ಎಂದು ಹೇಳಿಲ್ಲ. ಕುಮಾರಸ್ವಾಮಿಯೂ ಹೇಳಿಲ್ಲ, ದೊಡ್ಡವರೂ ಸಹ ಹೇಳಿಲ್ಲ. ನಾವು ಎರಡೂ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳುತ್ತೇವೆ ಎಂದರು.