ಬೆಂಗಳೂರು: ಒಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿದ್ರೆ, ಇತ್ತ ಬಿಜೆಪಿ ನಾಯಕರು ಸ್ಲಂಗಳತ್ತ ಚಿತ್ತ ಹರಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರ ಲಕ್ಷ್ಮಣಪುರಿ ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಿಎಸ್ವೈಗೆ ಸ್ಲಂ ನಿವಾಸಿಗಳು ಆರತಿ ಎತ್ತಿ, ಪೂರ್ಣಕುಂಭ ಸ್ವಾಗತ ಕೋರಿದ್ದಾರೆ. ಮುನಿರತ್ನ, ದೀಪಾ ದಂಪತಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದು ರಾತ್ರಿ ಅನ್ನ ಸಾಂಬಾರ್ ಊಟ ಮಾಡಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಹೋದ ಕಡೆಯೆಲ್ಲ ಬಿಜೆಪಿ ಬಂದಿದೆ ರಾಜ್ಯದಲ್ಲೂ ಅಷ್ಟೇ ಬಿಜೆಪಿ ಬರುತ್ತೆ ಅಂತ ತಿರುಗೇಟು ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಸ್ಲಂಗಳನ್ನ ಅಭಿವೃದ್ಧಿ ಮಾಡಿಲ್ಲ. ನಾವು ಕೊಳಗೇರಿಗಳ ಬಗ್ಗೆ ಅಧ್ಯಯನ ಮಾಡಿ ಪುಸ್ತಕ ಬಿಡುಗಡೆ ಮಾಡ್ತಾ ಇದ್ದು, ಸ್ಲಂಗಳ ಅಭಿವೃದ್ಧಿ ಸಂಪೂರ್ಣ ವಿವರ ಅದರಲ್ಲಿದೆ. ರಾಜ್ಯಾದ್ಯಂತ ಸ್ಲಂ ವಾಸ್ತಾವ್ಯ ಮಾಡ್ತೆನೆ. ನಮ್ಮ ಸರ್ಕಾರ ಬಂದರೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದಾಗಿ ಹೇಳಿದ್ರು.
ಇದೇ ಸಂದರ್ಭದಲ್ಲಿ ಅದೇ ಸ್ಲಂ ನ ಕೆಲ ಕಾಂಗ್ರೆಸ್ ನಿರುದ್ಯೋಗಿ ಯುವಕರು ಪಕೋಡ ಮಾರಾಟ ಮಾಡಿ ಪ್ರತಿಭಟನೆ ಮಾಡಿದ್ರು. ನಾವೆಲ್ಲ ಇದೇ ಸ್ಲಂನ ವಾಸಿಗಳು. ಮೋದಿ ಅವರು ನಿರುದ್ಯೋಗ ಸಮಸ್ಯೆ ಬಗ್ಗೆ ಕೇಳಿದ್ರೆ ಪಕೋಡ ಮಾರಾಟ ಮಾಡಿ ಜೀವನ ಮಾಡಿ ಅಂತಾರೆ. ನಾವೆಲ್ಲ ಕಷ್ಟ ಪಟ್ಟು ಓದಿ ವಿದ್ಯಾವಂತರಾಗಿದ್ದು, ಪಕೋಡ ಮಾರಾಟ ಮಾಡೋಕಾ ಅಂತಾ ಯುವಕರು ಆಕ್ರೋಶ ವ್ಯಕ್ತಪಡಿಸಿ, ಮೋದಿ ಮತ್ತು ಯಡಿಯೂರಪ್ಪನ ವಿರುದ್ಧ ಧಿಕ್ಕಾರ ಕೂಗಿದ್ರು.
ಇಂದು ಬೆಳಗ್ಗೆ ಸ್ಲಂ ಸ್ಥಿತಿಗತಿ ಬಗ್ಗೆ ವರದಿ ಬಿಡುಗಡೆ ಮಾಡಲಿದ್ದಾರೆ. ಬಿಎಸ್ವೈ ಸ್ಲಂ ವಾಸ್ತವ್ಯದ ಬಗ್ಗೆ ಕಾಂಗ್ರೆಸ್ ನಾಯಕರು ಇದೆಲ್ಲಾ ಗಿಮಿಕ್ ಅಂತಾ ಟೀಕೆ ಮಾಡಿದ್ದು. ಕಾಂಗ್ರೆಸ್ ನಾಯಕರ ಟೀಕೆಗೆ ಬಿಎಸ್ ವೈ ತಿರುಗೇಟು ನೀಡಿದ್ದಾರೆ.