ಮೈಸೂರು: ನನಗೆ ನೀವೆಲ್ಲ ನಾಮ ಹಾಕಿದ್ರಿ ಎಂದು ಕಾರ್ಯಕರ್ತರೊಬ್ಬರಿಗೆ ಸನ್ನೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಹುಣಸೂರಿನ ಧರ್ಮಾಪುರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ನನಗೆ ನೀವೆಲ್ಲ ನಾಮಹಾಕಿದಿರಿ ಎಂದು ಕಾರ್ಯಕರ್ತರೋಬ್ಬರಿಗೆ ಸನ್ನೆ ಮಾಡಿ ತೋರಿಸಿದ್ದಾರೆ.
ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ಕಾರ್ಯಕರ್ತ ಆಗಮಿಸಿದ್ದ. ಮಾತುಕತೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ತನ್ನ ಸೋಲನ್ನು ನೆನಪಿಸಿಕೊಂಡಿದ್ದಾರೆ. ಆಗ ನಿಮ್ಮನ್ನು ನಂಬಿದ್ದಕ್ಕೆ ನಾಮ ಹಾಕಿದಿರಲ್ಲ ಎಂದು ಹೇಳಿ ನಾಮವನ್ನು ಪ್ರದರ್ಶಿಸಿದ್ದಾರೆ.
ಉಪಚುನಾವಣೆಯಲ್ಲಿ ಹೆಚ್.ಪಿ.ಮಂಜುನಾಥ್ ಅವರನ್ನು ಗೆಲ್ಲಿಸಿ ಎಂದು ಕೈ ಸನ್ನೆ ಮೂಲಕವೇ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಸೂಚನೆ ನೀಡಿದರು. ಇದೇ ವೇಳೆ ವೇದಿಕೆ ಮೇಲೆಯೇ ಕಾರ್ಯಕರ್ತನನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಅಯೋಧ್ಯೆ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಹಲವು ದಶಕಗಳ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಈ ತೀರ್ಪನ್ನು ನಮ್ಮ ಪಕ್ಷ ಸ್ವಾಗತಿಸಿ, ಗೌರವಿಸುತ್ತದೆ. ಎರಡೂ ಧರ್ಮದವರು ಈ ತೀರ್ಪನ್ನು ಸ್ವಾಗತಿಸಬೇಕು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ನಮ್ಮಲ್ಲಿ ಮೂಡಲಿ ಅಭಿಪ್ರಾಯ ವ್ಯಕ್ತಪಡಿಸಿದರು.