– ತಮಿಳುನಾಡಿಗೆ ನೀರು ಬಿಡಲ್ಲ
ಚಾಮರಾಜನಗರ: ಸಂಸದ ಪ್ರತಾಪ್ ಸಿಂಹ (Pratap Simha) ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿ, ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆಂದು ಬಿಜೆಪಿಯವರು ಅಭ್ಯರ್ಥಿ ಬದಲಾವಣೆ ಮಾಡುತ್ತಿರಬಹುದು ನನಗೆ ಗೊತ್ತಿಲ್ಲ. ಯದುವೀರ್ ಆಗುವುದು,ಮಾಧ್ಯಮವರು ಸೃಷ್ಟಿ ಮಾಡಿಕೊಂಡು ಹೊಂದಾಣಿಕೆ ರಾಜಕೀಯ ಎಂದರೆ ಹೇಗೆ ಎಂದು ಕಿಡಿಕಾರಿದರು.
ತಾನು ಎಂಪಿಯಾದರೆ ಸಿಎಂ ಕುರ್ಚಿ ಅಲುಗಾಡಲಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ನೀಡಿ, ಎರಡು ಸಾರಿ ಎಂಪಿ ಆಗಿದ್ದಾರಲ್ಲ ನನ್ನ ಕುರ್ಚಿ ಅಲುಗಾಡಲೇ ಇಲ್ಲಾ, ಕ್ಯಾಂಡಿಡೇಟ್ ಯಾರದಾರೂ ಆಗಲಿ ನಾವು ಈ ಬಾರಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದರು.
ಸಂಸದ ಅನಂತ ಕುಮಾರ್ ಹೆಗಡೆ (Anant Kumar Hegde) ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಅನಂತಕುಮಾರ್ ಹೆಗ್ಡೆ ಆರ್ಡಿನರಿ ವ್ಯಕ್ತಿ ಅಲ್ಲ, 5 ಸಲ ಸಂಸದರಾಗಿದ್ದವರು, ಸಚಿವರಾಗಿದ್ದವರು. ಸಂವಿಧಾನ ಬದಲಿನ ವಿಚಾರ ಹೇಳಬೇಕಾದರೆ ಪಕ್ಷದ ತೀರ್ಮಾನ ಆಗಿರದೇ ಹೇಳಲು ಆಗತ್ತಾ?, ಅವರ ವಿರುದ್ಧ ಏನಾದರೂ ಕ್ರಮ ತೆಗೆದುಕೊಂಡರಾ ಎಂದು ಪ್ರಶ್ನೆ ಮಾಡಿದರು.
ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಅದಾಗಿದ್ದು, ಮನುವಾದದಲ್ಲಿ ನಂಬಿಕೆ ಇಟ್ಟವರು, ಸಂವಿಧಾನ ಜಾರಿಯಾದ ದಿನದಿಂದಲೂ ಅವರು ಸಂವಿಧಾನ ವಿರೋಧ ಮಾಡಿಕೊಂಡೇ ಬಂದಿದ್ದಾರೆ, ಈಗ ಅನಂತ ಕುಮಾರ್ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ ಎಂದರು.
ಸಿಎಎ ಚುನಾವಣಾ ಸಂದರ್ಭದಲ್ಲಿ ಏಕೆ ಜಾರಿ ಮಾಡಬೇಕಿತ್ತು..? ಧರ್ಮದ ಆಧಾರದ ಮೇಲೆ ಪೌರತ್ವ ಕೊಡಲು ನಮ್ಮ ವಿರೋಧವಿದೆ ಎಂದು ಸಿಎಎ ಜಾರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ : ಪ್ರತಾಪ್ ಸಿಂಹ
ಇದೇ ವೇಳೆ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂಬ ಆರ್.ಆಶೋಕ್ (R Ashok) ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರಾದರೂ ಕದ್ದು ಮುಚ್ಚಿ ನೀರು ಬಿಡುತ್ತಾರಾ? ನೀರು ಇದ್ರೆ ಅಲ್ವಾ ಬಿಡೋದು..? ಅವರು ಹೇಳುವುದು ಸುಳ್ಳು, ತಮಿಳುನಾಡಿಗೆ ತೊಟ್ಟು ನೀರು ಕೊಡುವುದಿಲ್ಲ, ಕುಡಿಯಲು ನೀರು ಇಟ್ಟುಕೊಳ್ಳದೇ ನಾವು ಕೊಡುವುದಿಲ್ಲ, ಅವರು ನೀರು ಕೊಡಿ ಎಂದು ಕೇಳೂ ಇಲ್ಲಾ ಸುಮ್ನೆ ಯಾಕೆ ನೀರು ಕೊಡುತ್ತೇವೆ, ತಮಿಳುನಾಡಿಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ. ತಮಿಳುನಾಡು ಕೇಳಿದರೂ ನೀರು ಕೊಡಲ್ಲ, ಕೇಂದ್ರ ಹೇಳಿದರೂ ನೀರು ಕೊಡಲ್ಲ, ಯಾರೂ ಹೇಳಿದರೂ ನೀರು ಕೊಡಲ್ಲ ಎಂದರು.