ತುಮಕೂರು: ಸಿದ್ದಗಂಗಾ ಮಠದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಠದಲ್ಲಿ ಅಟವೀ ಶ್ರೀಗಳ 119ನೇ ಹಾಗೂ ಉದ್ಧಾನ ಶ್ರೀಗಳ 79ನೇ ಪುಣ್ಯಾರಾಧನೆ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿದೆ.
ಬೆಳಗ್ಗೆಯೇ ಉದ್ದಾನ ಶಿವಯೋಗಿಗಳ ಹಾಗೂ ಅಟವಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಬಳಿಕ ಇಬ್ಬರೂ ಸಂತರ ಭಾವಚಿತ್ರವನ್ನು ಮಠದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ನೃತ್ಯ ತಂಡಗಳು ಭಾಗವಹಿಸಿದ್ದು, ಮಠದ ಮಕ್ಕಳು ಸಂಭ್ರಮದಲ್ಲಿ ಪಾಲ್ಗೊಂಡು ಖುಷಿಪಟ್ಟರು.
ಇಂದು ಪ್ರಾತಃ ಕಾಲದಿಂದಲೇ ಶ್ರೀ ಮಠದಲ್ಲಿ ವೇದ ಘೋಷಗಳು ಮೊಳಗಿತ್ತು. ಈ ವೇಳೆ ನೂರಾರು ಸಾಧು-ಸಂತರು ಉಪಸ್ಥಿತರಿದ್ದು ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳು ಇಷ್ಟಲಿಂಗ ಪೂಜೆ ಬಳಿಕ ಸಂಕ್ರಾಂತಿಯ ವಿಶೇಷ ಪೂಜೆಯಲ್ಲಿ ಭಾಗಿಯಾದರು.
ಮಕರ ಸಂಕ್ರಾಂತಿ ಪ್ರಯುಕ್ತ ಮಠದ ಭಕ್ತರು ಹಾಗೂ ವಿದ್ಯಾರ್ಥಿಗಳಿಗೆ ಬುಂದಿ- ಪಾಯಸ, ಹೋಳಿಗೆ ಊಟ ಮಾಡಲಾಗಿದೆ.