ತುಮಕೂರು: ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸಂತಸದ ವಿಚಾರ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಶ್ಲಾಘಿಸಿದರು.
ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಶೀಘ್ರವೇ ಕಾನೂನು ಮುಕ್ತ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸಂತಸದ ವಿಚಾರವಾಗಿದೆ. ಜೊತೆಗೆ ಹೆಚ್ಚಾಗಿ ಬರುವ ಆದಾಯವನ್ನು ಸರ್ಕಾರ ಜನಪರ ಯೋಜನೆಗಳಿಗೆ ಬಳಸಿಕೊಳ್ಳಲಿ. ದೇವಸ್ಥಾನ ಒಬ್ಬರಿಗೆ ಸೇರಿದಂತದಲ್ಲ. ಬೇರೆ ಬೇರೆ ಊರುಗಳಿಂದ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ದೇವಸ್ಥಾನದ ಆದಾಯದಿಂದ ದೇವಸ್ಥಾನದ ಮೂಲಸೌಕರ್ಯ ಹೆಚ್ಚಲಿದೆ. ಅಲ್ಲಿ ಕಾರ್ಯನಿರ್ವಹಿಸುವ ಅರ್ಚಕರ ಜೀವನ ಭದ್ರತೆಗೆ ಅನುಕೂಲವಾಗಲಿ ಎಂದು ನುಡಿದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಆಡಳಿತದಲ್ಲಿದ್ದಾಗ ಗೂಂಡಾಗಿರಿ ನಡೆಯುತ್ತಿತ್ತು: ಅಮಿತ್ ಶಾ
ದೇವಾಲಯದ ಅಗತ್ಯಕ್ಕೆ ಮೀರಿ ಆದಾಯ ಇದ್ದರೆ ಅದನ್ನು ಸರ್ಕಾರ ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳಲಿ. ಈ ರೀತಿಯ ಕಾನೂನು ತರುವುದು ಒಳ್ಳೆಯದು. ನೀರಾವರಿ ಯೋಜನೆ, ಬಡತನ ನಿರ್ಮೂಲನೆ, ಹಳ್ಳಿಗಳ ರಸ್ತೆ ಅಭಿವೃದ್ಧಿಯಂಥಹ ಒಳ್ಳೆ ಕೆಲಸಕ್ಕೆ ದೇವಸ್ಥಾನದ ದುಡ್ಡು ವಿನಿಯೋಗವಾಗಲಿ. ಈ ಹಣದಿಂದ ಮಾಡಿದ ಸಾಮಾಜಿಕ ಕೆಲಸ ಜನಜನಿತವಾಗುವಂತೆ ಉಳಿಯಲಿ. ಚರ್ಚ್, ಮಸೀದಿ ಅಂತ ಬೇರೆ ಇಲ್ಲ. ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದರು. ಇದನ್ನೂ ಓದಿ: ಭಾರೀ ಮಳೆ ಮುನ್ಸೂಚನೆ ನೀಡಲು ಹವಾಮಾನ ಇಲಾಖೆಯಿಂದ ಸಾಧ್ಯವಾಗಿಲ್ಲ: ಎಂ.ಕೆ.ಸ್ಟಾಲಿನ್
ಕಾನೂನು ಎಂದ ಮೇಲೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುವಂತಿರಬೇಕು. ಮಠಗಳು ತಮ್ಮದೇ ಆದ ಅಸ್ತಿತ್ವ ಹೊಂದಿವೆ. ತಮ್ಮದೇ ಸೇವೆ ಮಾಡಿಕೊಂಡು ಬಂದಿವೆ. ಸರ್ಕಾರ ಇದರಲ್ಲಿ ಮಧ್ಯಸ್ಥಿಕೆ ವಹಿಸುವಂತಹ ಅವಶ್ಯಕತೆ ಇರೋದಿಲ್ಲ ಎಂದು ತಿಳಿಸಿದರು.