ನವದೆಹಲಿ: ಟಿಪ್ಪು ಜಯಂತಿಯನ್ನು ಆಚರಣೆ ಮಾಡುವ ಪದ್ಧತಿಗೆ ಸಿದ್ದರಾಮಯ್ಯ ಅವರು ನಾಂದಿ ಹಾಕಿದ್ದರು. ಆದರೆ ಮೊದಲ ಜಯಂತಿಯಂದೇ ನಾವು ಮಡಿಕೇರಿಯಲ್ಲಿ ಕುಟ್ಟಪ್ಪರನ್ನು ಕಳೆದುಕೊಂಡಿದ್ದೆವು. ರಾಜ್ಯ ಹಲವು ಕಡೆ ಇಂತಹದ್ದೆ ಸಂಘರ್ಷ ನಿರ್ಮಾಣ ಆಗಿತ್ತು. ಈ ಹಿನ್ನೆಲೆಯಲ್ಲಿ ನಾವು ಕೊಟ್ಟ ಭರವಸೆಯನ್ನು ನಡೆಸಿಕೊಂಡಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಎಲ್ಲರೂ ಒಪ್ಪುವಂತಹ ವ್ಯಕ್ತಿಯಲ್ಲ. ಯಾವುದೇ ಮುಸ್ಲಿಂ ನಾಯಕ, ಮೌಲ್ವಿ ಟಿಪ್ಪು ಆಚರಣೆಗೆ ಕೇಳಿರಲಿಲ್ಲ. ಕೇವಲ ವೋಟ್ ಬ್ಯಾಂಕಿಗಾಗಿ ಇದನ್ನು ಸಿದ್ದರಾಮಯ್ಯ ಅವರು ಆಚರಣೆ ತಂದರು. ಪ್ರತಿ ವರ್ಷ ನಾವು ವಿರೋಧ ಮಾಡಿದ್ದೆವು. ಅಲ್ಲದೇ ಕಾನೂನು ನಿಯಂತ್ರಣ ಕಷ್ಟ ಎನ್ನುವ ವರದಿಗಳನ್ನು ಅಧಿಕಾರಿಗಳು ಕೊಟ್ಟಿದ್ದರು. ಇದನ್ನೆಲ್ಲ ಪರಿಗಣಿಸದೇ ಮೈತ್ರಿ ಸರ್ಕಾರ ಆಚರಣೆಯನ್ನು ಮುಂದುವರಿಸಿತ್ತು. ಆದರೆ ನಾವು ಭರವಸೆ ಕೊಟ್ಟಂತೆ ಟಿಪ್ಪು ಜಯಂತಿ ರದ್ದು ಮಾಡಿದ್ದೇವೆ ಎಂದರು.
ಟಿಪ್ಪು ಜಯಂತಿ ಆಚರಣೆ ವೇಳೆ ಆಗುತ್ತಿದ್ದ ಘರ್ಷಣೆಯನ್ನು ತಡೆಯಲು ಈ ನಿರ್ಧಾರ ಮಾಡಿದ್ದೇವೆ. ಕುರಾನ್ ನಲ್ಲೂ ಕೂಡ ವ್ಯಕ್ತಿ ಪೂಜೆಯನ್ನು ಒಪ್ಪುವುದಿಲ್ಲ. ರಾಜ್ಯ ಜನರಿಗೆ ಈ ಬಗ್ಗೆ ಭರವಸೆ ನೀಡಿದ್ದಂತೆ ಮಾಡಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.