ಬೆಂಗಳೂರು: ಬುದ್ಧಿವಂತ ರಾಜಕಾರಣಿಯನ್ನು ಇಂದು ನಮ್ಮ ದೇಶ ಕಳೆದುಕೊಂಡಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂದರೆ ಅದು ಕರ್ನಾಟಕದಲ್ಲಿ ಬರಬೇಕೆಂದು ಅರುಣ್ ಜೇಟ್ಲಿ ಅವರು ಆಸೆ ಇಟ್ಟುಕೊಂಡಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ದೂರವಾಣಿ ಮೂಲಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅರುಣ್ ಜೇಟ್ಲಿ ಅವರು ಕರ್ನಾಟಕದವರ ಜೊತೆ ಅತ್ಯಂತ ಬಾಂಧವ್ಯ ಇಟ್ಟುಕೊಂಡಿದ್ದರು. ಜೊತೆಗೆ ಹಲವಾರು ಚುನಾವಣೆಗಳಿಗೆ ರಾಜಕೀಯ ಇನ್ ಚಾರ್ಚ್ ಕೂಡ ಆಗಿದ್ದರು. ಇಷ್ಟೊಂದು ಬುದ್ಧಿವಂತ ರಾಜಕಾರಣಿಯನ್ನು ಇಂದು ನಮ್ಮ ದೇಶ ಕಳೆದುಕೊಂಡಿದೆ. ಇದರಿಂದ ತುಂಬಾ ದುಃಖವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂದರೆ ಅದು ಕರ್ನಾಟಕದಲ್ಲಿ ಬರಬೇಕೆಂದು 2004 ಮತ್ತು 2008ರಲ್ಲಿ ಎಲ್ಲ ಸಂದರ್ಭದಲ್ಲೂ ಅರುಣ್ ಜೇಟ್ಲಿ ಅವರು ಆಸೆ ಇಟ್ಟುಕೊಂಡಿದ್ದರು. ಅದಕ್ಕಾಗಿ ಎಲ್ಲ ರೀತಿಯಲ್ಲೂ ಮಾರ್ಗದರ್ಶನ ನೀಡುತ್ತಿದ್ದರು. ಪಾರ್ಲಿಮೆಂಟಿನಲ್ಲಿ ಅವರು ಮಾತನಾಡಿದರೆ ಎಲ್ಲರೂ ಅವರ ಬಳಿ ಓಡಿ ಬಂದು ಭಾಷಣ ಕೇಳುತ್ತಿದ್ದರು. ಅವರು ಬುದ್ಧಿವಂತರಿಗೆ ಏನು ಬೇಕೋ ಅದನ್ನು ಭಾಷಣದ ಮೂಲಕ ಕೊಡುತ್ತಿದ್ದರು. ಹೀಗಾಗಿ ಅವರೊಬ್ಬ ಭಾಷಣಕಾರರಾಗಿದ್ದರು. ನಿಜವಾಗಿಯೂ ಭಾರತದ ಪಾರ್ಲಿಮೆಂಟ್ ಅವರನ್ನು ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅರಣ್ ಜೇಟ್ಲಿ ಅವರು ಯಾವಾಗಲೂ ನನಗೆ ಸಹಾಯ, ಮಾರ್ಗದರ್ಶನ ನೀಡಿದ್ದಾರೆ. ಕಷ್ಟದಲ್ಲೂ ಜೊತೆಯಲ್ಲಿದ್ದರು. ಪಕ್ಷದಲ್ಲಿ ಶ್ರಮಪಟ್ಟು ಕೆಲಸ ಮಾಡುವವರನ್ನು ತುಂಬಾ ಇಷ್ಟಪಡುತ್ತಿದ್ದರು. ಒಂದು ಕಾಲದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಜೊತೆ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಇನ್ನೂ ಅನೇಕರು ಪ್ರಮುಖ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಹಾಕಿದ ಅಡಿಪಾಯವೇ ಇಂದು ದೇಶದಲ್ಲಿ ನಾವು ಇಷ್ಟು ಫಲವತ್ತಾಗಿ ಬರಲು ಸಾಧ್ಯವಾಗಿದೆ ಎಂದು ಅರುಣ್ ಜೇಟ್ಲಿಯವರನ್ನು ನೆನಪಿಸಿಕೊಂಡು ಮಾತನಾಡಿದರು.