ಜೈಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು (Indira Gandhi) ಇಂದು ಬದುಕಿದ್ದರೆ ಬಿಜೆಪಿಯನ್ನು (BJP) ಬ್ಯಾನ್ ಮಾಡಿರುತ್ತಿದ್ದರು ಎಂಬ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹೇಳಿಕೆ ವಿವಾದ ಹುಟ್ಟುಹಾಕಿದೆ.
ಅಶೋಕ್ ಗೆಹ್ಲೋಟ್ ಭಾನುವಾರ ಜೈಪುರದಲ್ಲಿ ಈ ಬಗ್ಗೆ ಮಾತನಾಡಿ, ಪ್ರಸ್ತುತ ದೇಶದಲ್ಲಿ ನಿರ್ಮಾಣವಾಗಿರುವ ವಾತಾವರಣ ಅತ್ಯಂತ ಅಪಾಯಕಾರಿಯಾಗಿದೆ. ನನ್ನ 50 ವರ್ಷಗಳ ರಾಜಕಾರಣದಲ್ಲೇ ಇಂತಹ ಪರಿಸ್ಥಿತಿಯನ್ನು ಎಂದಿಗೂ ನೋಡಿರಲಿಲ್ಲ. ದೇಶ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಒಬ್ಬೇ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ಕೊಟ್ಟಿಲ್ಲ. ಅಲ್ಲಿ ಕನಿಷ್ಠ 5 ಟಿಕೆಟ್ಗಳನ್ನಾದರೂ ಮುಸ್ಲಿಂ ಅಭ್ಯರ್ಥಿಗಳಿಗೆ ನೀಡಬಹುದಿತ್ತು. ಆದರೆ ನೀವು ಸಂಪೂರ್ಣ ಹಿಂದುತ್ವವಾದಿ ಪಕ್ಷ ಎಂದು ಬಿಂಬಿಸಿಕೊಳ್ಳಲು ಈ ಪ್ರಯತ್ನ ಮಾಡುತ್ತಿದ್ದೀರಿ. ನೀವು ಕೇವಲ ಹಿಂದುತ್ವದ ಅಜೆಂಡಾದ ಮೇಲೆ ಪಕ್ಷ ನಡೆಸಲು ಬಯಸುತ್ತೀರಾ? ಹಿಂದೂಗಳ ಹೆಸರಿನಲ್ಲಿ ಮಾತ್ರ ನೀವು ರಾಜಕಾರಣ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ಗೆ ಹಿಂದೂಗಳ ಮೇಲೆ ದ್ವೇಷವಿದೆ: ಬಿಜೆಪಿ ಕಿಡಿ
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, ಕಾಂಗ್ರೆಸ್ಗೆ ಹಿಂದೂಗಳ ಮೇಲೆ ದ್ವೇಷವಿದೆ ಎನ್ನುವುದಕ್ಕೆ ಈ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಪ್ರಕಾರ ಹಿಂದುತ್ವ ಎನ್ನುವುದು ಒಂದು ಜೀವನ ಪದ್ಧತಿಯಾಗಿದೆ. ಹೀಗಿರುವಾಗಿ ಇಂದಿರಾ ಗಾಂಧಿಯವರು ಯಾಕೆ ನಿಷೇಧಿಸುತ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.
ಗೆಹ್ಲೋಟ್ ಮಾತುಗಳು ಕಾಂಗ್ರೆಸ್ ನಾಯಕರ ತುರ್ತು ಪರಿಸ್ಥಿತಿಯ ಮನಸ್ಥಿತಿ ಮತ್ತು ಹಿಂದೂಗಳ ಮೇಲಿನ ದ್ವೇಷವನ್ನು ತೋರಿಸುತ್ತದೆ. ಇದನ್ನು ಇನ್ಮುಂದೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತ ಕರೆಯಬಾರದು. ಬದಲಾಗಿ ಇಂಡಿಯನ್ ನ್ಯಾಷನಲ್ ಕ್ಯಾಲಿಫೇಟ್ ಅಂತ ಕರೆಯಬೇಕು. ಕಾಂಗ್ರೆಸ್ ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರು ಹಕ್ಕು ಹೊಂದಿದ್ದಾರೆ ಹಾಗೂ ಕಾಂಗ್ರೆಸ್ಗೆ ಮುಸ್ಲಿಮರ ಅಗತ್ಯವಿದೆ ಅಂತ ಹೇಳುತ್ತಾರೆ. ಆದರೆ ನಾವು ಹಿಂದುತ್ವದ ಪರ ಮಾತನಾಡಿದರೆ ದೊಡ್ಡ ಪಾಪ ಮಾಡಿದ ಹಾಗೇ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
