ಶಿವಮೊಗ್ಗ: ಕರ್ತವ್ಯನಿರತ ವೈದ್ಯಾಧಿಕಾರಿಯ ವರ್ಗಾವಣೆ ಮಾಡಿದ ಜಿಲ್ಲಾ ವೈದ್ಯಾಧಿಕಾರಿಯ ಕ್ರಮ ಖಂಡಿಸಿ ಹೊಸನಗರ ತಾಲೂಕಿನ ಸೊನಲೆ ಗ್ರಾಮಸ್ಥರು ಇಂದು ಹೊಸನಗರದ ತಾಲೂಕು ಆಸ್ಪತ್ರೆ ಮುಂದೆ ಆಹೋರಾತ್ರಿ ಧರಣಿ, ಸತ್ಯಾಗ್ರಹ ನಡೆಸುತ್ತಿದ್ದಾರೆ.
ತಾಲೂಕಿನ ಸೊನಲೆ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಡಾ.ಮಾರುತಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದು ಅವರನ್ನು ರಿಪ್ಪನ್ಪೇಟೆಗೆ ವರ್ಗಾವಣೆ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಇವರೊಬ್ಬರೇ ವೈದ್ಯರು ಇರುವ ಕಾರಣ ಇದೀಗ ಇರುವ ಒಬ್ಬ ವೈದ್ಯರನ್ನು ವರ್ಗಾವಣೆ ಮಾಡಿದರೇ ಇಲ್ಲಿನ ಹಲವು ರೋಗಿಗಳಿಗೆ ವೈದ್ಯರಿಲ್ಲದಂತಾಗುತ್ತದೆ.
ಈಗಾಗಿ ವೈದ್ಯರ ವರ್ಗಾವಣೆ ಖಂಡಿಸಿ ಇಲ್ಲಿನ ಸ್ಥಳೀಯ ನಾಗರೀಕರು, ಸಂಘ-ಸಂಸ್ಥೆಗಳು, ಪಕ್ಷಾತೀತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ರವಾನಿಸಿದ್ದಾರೆ. ಈ ನಿಯೋಜನೆಯನ್ನು ರದ್ದುಗೊಳಿಸುವವರೆಗೆ ಅಹೋರಾತ್ರಿ ಧರಣಿ ಮತ್ತು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಸ್ವಾಮಿರಾವ್, ತಾ.ಪಂ ಸದಸ್ಯ ಆಲವಳ್ಳಿ ವೀರೇಶ್, ವಾಲೆಮನೆ ನಾಗೇಶ್, ಗುರುಶೆಟ್ಟಿ ಬಿಳ್ಳೋಡಿ, ನಿವಣೆ ಮಹೇಶ್ ಗೌಡ, ಸೊನಲೆ ಸುರೇಶ್, ಸೊನಲೆ ರಾಜೇಶ್, ಸೊನಲೆ ವಿಜಯೇಂದ್ರಗೌಡ, ಹರೀಶ್, ವಿದ್ಯಾ, ಸುಮಾ, ರೂಪ, ಚೈತ್ರ, ಸುಮಿತ್ರ, ಅನುಪಮ, ನವ್ಯ, ಮಹಿಳಾ ಹಾಗೂ ಪುರುಷ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.