ಶಿವಮೊಗ್ಗ: ಉಪ ಚುನಾವಣ ಕಣ ಸಮರದಲ್ಲಿ ಶಿವಮೊಗ್ಗ ಗೆಲ್ಲಲು ತೀವ್ರ ಪೈಪೋಟಿ ನಡೆದಿದೆ. ಇಬ್ಬರು ಮಾಜಿ ಸಿಎಂ ಪುತ್ರರು ಗೆಲುವಿಗಾಗಿ ಹಣಾಹಣಿ ನಡೆಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಮತ್ತು ಮಾಜಿ ಸಿಎಂ ಎಸ್ ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ ನಡುವಿನ ನೇರ ಪೈಪೋಟಿಯ ಕಣವೇ ಶಿವಮೊಗ್ಗ. ಮೊದಲ ಬಾರಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ನಿಲ್ಲಿಸದೇ ದೋಸ್ತಿ ಜೆಡಿಎಸ್ ಬೆನ್ನಿಗೆ ನಿಂತಿದೆ.
ಈ ಮೂಲಕ ಯಡಿಯೂರಪ್ಪ ತವರಲ್ಲೇ ಬಿಜೆಪಿ ಭದ್ರಕೋಟೆಯನ್ನೇ ಒಡೆದು ಹಾಕುವ ಮಹಾಯತ್ನದ ಪರೀಕ್ಷೆ ನಡೆಸಿದೆ ಮೈತ್ರಿಕೂಟ. ಮೈತ್ರಿ ಮತಗಳ ಕ್ರೋಢೀಕರಣ ಮತ್ತು ಬಂಗಾರಪ್ಪ ಮೇಲಿನ ಅಕ್ಕರೆಯ ಮಳೆಗೆರೆದು ಮತ ಸೆಳೆಯೋ ಪ್ರಯತ್ನವೂ ನಡೆದಿದೆ. ಆದರೆ ಅತೀ ಹೆಚ್ಚು ಶಾಸಕರನ್ನ ಹೊಂದಿರೋ ಕಾರಣ ನನ್ನ ಕೋಟೆಯಲ್ಲಿ ನನ್ನದೇ ಆಟ ಅನ್ನೋದು ಯಡಿಯೂರಪ್ಪ ವಾದ ನಿಜ ಆಗುತ್ತಾ..? ಎಂಬುತ್ತಾ ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.
* ಶಿವಮೊಗ್ಗದಲ್ಲಿ ಯಾರ ನಡುವೆ ಪೈಪೋಟಿ?
1. ಬಿ ವೈ ರಾಘವೇಂದ್ರ – ಬಿಜೆಪಿ
2. ಮಧು ಬಂಗಾರಪ್ಪ – ಕಾಂಗ್ರೆಸ್+ಜೆಡಿಎಸ್ ಮೈತ್ರಿಕೂಟ
ಶಿವಮೊಗ್ಗದಲ್ಲಿ ಕ್ಷೇತ್ರದ ಜಾತಿ ಚಿತ್ರಣ
ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ, 16,45,511 ಇದರಲ್ಲಿ ಪುರುಷರು 8,27,111 ಹಾಗೂ ಮಹಿಳೆಯರು 8,17,948 ಇದೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಲಿಂಗಾಯಿತರು 2.7 ಲಕ್ಷ, ದಲಿತರು 2 ಲಕ್ಷ, ಈಡಿಗರು 2 ಲಕ್ಷ, ಬ್ರಾಹ್ಮಣರು 1.5 ಲಕ್ಷ, ಮುಸ್ಲಿಮರು 1.3 ಲಕ್ಷ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯಿತ, ದಲಿತರು ಹಾಗೂ ಈಡಿಗ ಸಮುದಾಯದ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸದ್ಯದ ಶಿವಮೊಗ್ಗದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 7ರಲ್ಲಿದ್ದರೆ, ಕಾಂಗ್ರೆಸ್ ಕೇವಲ 1 ಕ್ಷೇತ್ರವನ್ನು ವಶದಲ್ಲಿಟ್ಟುಕೊಂಡಿದೆ.
2014ರ ಲೋಕಸಭಾ ಚುನಾವಣಾ ಫಲಿತಾಂಶ ಏನಾಗಿತ್ತು?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಜೆಪಿ ತೊರೆದು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ತರಲು ಪುನಃ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ 6,06,216 ಮತಗಳನ್ನು ಪಡೆದು 3,63,305 ಮತಗಳ ಅಂತರದಿಂದ ಭಾರೀ ಜಯಭೇರಿಯನ್ನು ಬಾರಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,42,611 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್ ನ ಗೀತಾ ಶಿವರಾಜ್ ಕುಮಾರ್ 2,40,636 ಮತಗಳನ್ನು ಗಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv