ಶಿವಮೊಗ್ಗ: ಮೊಬೈಲ್ ವಿಷಯಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ಬಾಲಕಿಯನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಗಾಡಿಕೊಪ್ಪ ಬಡಾವಣೆಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು 5 ವರ್ಷದ ರಂಜನಿ ಎಂದು ಗುರುತಿಸಲಾಗಿದೆ. ರಂಜನಿ ತಾಯಿಯ ತಮ್ಮ ಸಂತೋಷ್ (23) ಎಂಬಾತನೇ ಬಾಲಕಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಮೃತ ಬಾಲಕಿ ರಂಜನಿ ತಂದೆ-ತಾಯಿ ಚಿತ್ರದುರ್ಗದ ಮೂಲದವರಾಗಿದ್ದು, ಅಲ್ಲಿಯೇ ವಾಸಿಸುತ್ತಿದ್ದಾರೆ. ಆದರೆ ಮಗಳನ್ನು ಅಜ್ಜ-ಅಜ್ಜಿಯ ಬಳಿ ಬಿಟ್ಟಿದ್ದರು. ಸಂತೋಷ್ ಮಾನಸಿಕ ಅಸ್ವಸ್ಥನಾಗಿದ್ದು ಮೊಬೈಲ್ ತೆಗೆದುಕೊಳ್ಳುವ ವಿಷಯಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದನು. ಜಗಳದ ನಂತರ ತಂದೆ ಸಂತೋಷನಿಗೆ ಮೊಬೈಲ್ ಕೊಡಿಸಿದ್ದರು. ಆದರೆ ಈ ಮೊಬೈಲನ್ನು ಬಾಲಕಿ ಒಂದು ಬಾರಿ ಹಾಳು ಮಾಡಿದ್ದಳು ಎಂಬ ಕೋಪ ಸಹ ಸಂತೋಷನಿಗೆ ಇತ್ತು. ಹೀಗಾಗಿ ರಂಜನಿಯನ್ನು ಇಂದು ಮಲಗಿದ್ದಲ್ಲಿಯೇ ಚಾಕು ಇರಿದು ಸಂತೋಷ್ ಕೊಲೆ ಹತ್ಯೆಗೈದಿದ್ದಾನೆ.
ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಸಂತೋಷ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.