ಉಡುಪಿ: 2018ರ ಚುನಾವಣೆಯ ನಂತರ ಡಿ.ಕೆ ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಚರ್ಚೆಗಳು ಶುರುವಾಗಿದೆ. ಈ ನಡುವೆ ಉಡುಪಿಯ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಡಿಕೆಶಿ ಶತಚಂಡಿಕಾ ಹೋಮ ಮಾಡಿಸುತ್ತಿದ್ದಾರೆ.
ಐಟಿ ದಾಳಿಯಿಂದ ನಲುಗಿಹೋಗಿರುವ ಇಂಧನ ಸಚಿವ ಡಿ.ಕೆ ಶಿವಕುಮಾರ್ ಕೊಲ್ಲೂರು ಮೂಕಾಂಬಿಕೆಯ ಮೊರೆ ಹೋಗಿದ್ದಾರೆ. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಡಿಕೆಶಿ ಶತಚಂಡಿಕಾ ಹೋಮಕ್ಕೆ ಪ್ರಾರ್ಥನೆ ಮತ್ತು ಸಂಕಲ್ಪ ಮಾಡಿದ್ದಾರೆ. ರಾಜಕೀಯ ಅಭಿವೃದ್ಧಿ, ಇಷ್ಟಾರ್ಥ ಸಿದ್ಧಿ, ಶತ್ರು ನಾಶ, ಹರಕೆ, ಉದ್ಯಮ, ಆರೋಗ್ಯ, ಮಾನಸಿಕ ನೆಮ್ಮದಿ, ಕೌಟುಂಬಿಕ ಕಲಹ ಹೀಗೆ ಸಕಲ ದೋಷ ನಿವಾರಣೆ ಮತ್ತು ಶ್ರೇಯೋಭಿವೃದ್ಧಿಗೆ ಚಂಡಿಕಾ ಹೋಮ ಮಾಡಿಸಲಾಗುತ್ತದೆ. ಇದನ್ನೂ ಓದಿ: ಪಂಥಾಹ್ವಾನ ನೀಡಿದ್ರೂ `ಪವರ್’ಫುಲ್ ಸಚಿವರು ಸೈಲೆಂಟ್ ಆಗಿರೋದಕ್ಕೆ ಅಜ್ಜಯ್ಯ ಕಾರಣನಾ?
ಸಾವಿರ ಚಂಡಿಕಾ ಹೋಮಕ್ಕೆ ಸರಿಸಾಟಿಯಾದ ಹೋಮ ಮಾಡಿಸುತ್ತಿರುವ ಡಿ.ಕೆ ಶಿವಕುಮಾರ್, ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತ. ಡಿಕೆಶಿ ತನ್ನ ರಾಜಕೀಯ ಮತ್ತು ಉದ್ಯಮದಲ್ಲಿ ಯಶಸ್ಸು ಮತ್ತು ಸಂಕಷ್ಟ ಬಂದಾಗ ಕೊಲ್ಲೂರಿಗೆ ಬಂದು ಪೂಜೆ, ಹೋಮ ಮಾಡಿಸುತ್ತಾರೆ. ಇದನ್ನೂ ಓದಿ: ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ
ಶತಚಂಡಿಕಾ ಹೋಮ ಸೇವೆಗೆ ಬೆಳಗ್ಗೆ ಚಾಲನೆ ಸಿಕ್ಕಿದ್ದು, ಮೂರು ದಿನಗಳ ಕಾಲ ನಿರಂತರ ಯಾಗ ನಡೆಯಲಿದೆ. ಜನವರಿ 8ರ ಮಧ್ಯಾಹ್ನ ಚಂಡಿಕಾ ಹೋಮದ ಪೂರ್ಣಾಹುತಿ ನಡೆಯಲಿದೆ. ದೇವಳದ ಹಿರಿಯ ಅರ್ಚಕ ನರಸಿಂಹ ಅಡಿಗ ನೇತ್ರತ್ವದಲ್ಲಿ ಶತಚಂಡಿಕಾಯಾಗ ಆರಂಭವಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಗ್ರಾಮಕ್ಕೆ ಡಿಕೆಶಿ ಮೂರು ದಿನ ಬರ್ತಾರೆ ಎಂದು ಹೇಳಲಾಗಿದೆ.
ಸೋಮವಾರ ಉಡುಪಿಯಲ್ಲಿ ನಡೆಯೋ ಮೂರು ಸಮಾವೇಶದಲ್ಲಿ ಸಿಎಂ ಇರಲಿದ್ದು, ಈ ಸಂದರ್ಭ ಡಿಕೆಶಿಯೂ ಜೊತೆಗಿರ್ತಾರೆ. ಇತ್ತ ಹೋಮ, ಅತ್ತ ರಾಜಕೀಯ ಪ್ರಚಾರದಲ್ಲಿ ಪಾಲ್ಗೊಂಡು ಸ್ವಾಮಿ ಮತ್ತು ಸ್ವ-ಕಾರ್ಯದಲ್ಲಿ ಡಿಕೆಶಿ ತೊಡಗಲಿದ್ದಾರೆ ಎನ್ನಲಾಗಿದೆ.