ತುಮಕೂರು: ಲಿಂಗಾಯತ ಧರ್ಮದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದಕ್ಕೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಟಾಂಗ್ ನೀಡಿದ್ದಾರೆ.
ಗುಬ್ಬಿ ತಾಲೂಕಿನ ಹೇರೂರಿನಲ್ಲಿ ವೀರಶೈವ ಮಹಾಸಭಾದ ತಾಲೂಕಾ ಘಟಕದ ಉದ್ಘಾಟನೆ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಶಿವಶಂಕರಪ್ಪ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತ, ಲಿಂಗಾಯತರು ಹಿಂದು ಧರ್ಮದ ಒಳಗೂ ಇಲ್ಲ ಹೊರಗೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಏನು ಲಿಂಗಾಯತರಾ? ಅವರ ಅಭಿಪ್ರಾಯ ತೆಗೆದುಕೊಂಡು ನಾವು ಏನು ಮಾಡೋದಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರೇ ಧರ್ಮ ಒಡೆಯಲು ಪ್ರಯತ್ನ ಮಾಡಿದ್ದರು ಆಗಲಿಲ್ಲ. ಅದಕ್ಕೆ ಈಗ ಸುಮ್ಮನ್ನಿದ್ದಾರೆ. ಹೊಸ ಹೊಸ ಹೇಳಿಕೆ ಹುಟ್ಟುಹಾಕುತ್ತಾರೆ. ಅವರ ಬಗ್ಗೆ ಮತ್ತೆ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.
ವೀರಶೈವರು, ಲಿಂಗಾಯತರು ಒಂದೇ ನಾಣ್ಯದ ಎರಡು ಮುಖಗಳು. ನಾವೆಲ್ಲಾ ಒಂದೇ ಎನ್ನುವ ಭಾವನೆಯಿಂದ ಬದುಕುತ್ತಿದ್ದೇವೆ. ಅದನ್ನೇ ನಾವು ಫಾಲೋ ಮಾಡಿಕೊಂಡು ಬಂದಿದ್ದೇವೆ. ನಮ್ಮನ್ನು ಬೇರೆ ಮಾಡಲು ಪ್ರಯತ್ನ ಮಾಡಬೇಡಿ ಎಂದು ಹೇಳಿದರು.