ಮಡಿಕೇರಿ: ಕೊಡಗಿನ ಹಿರಿಯ ಸಾಹಿತಿ ಲೇಖಕ ಎನ್.ಎಸ್.ದೇವಿಪ್ರಸಾದ್(79) ಇಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಮಡಿಕೇರಿ ತಾಲ್ಲೂಕಿನ ಸಂಪಾಜೆಯಲ್ಲಿ ದೇವಿಪ್ರಸಾದ್ ಅವರು ನೆಲೆಸಿದ್ದರು. ಇವರ ನಿರ್ಮಾಣದ ‘ಮೂರು ದಾರಿಗಳು’ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಹ ಲಭಿಸಿತ್ತು. ಅಷ್ಟೇ ಅಲ್ಲದೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ದೇವಿಪ್ರಸಾದ್ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ನಿಧನ
ಸಂಪಾಜೆಯಲ್ಲಿ ಸಹಕಾರಿ ಮತ್ತು ಶಿಕ್ಷಣ ಕ್ಷೇತ್ರಗಳ ಬೆಳವಣಿಗೆಗೆ ದೇವಿಪ್ರಸಾದ್ ಕೊಡುಗೆ ಅಪಾರವಾಗಿದೆ. ಸಂಪಾಜೆಯಲ್ಲಿ ಲಯನ್ಸ್ ಕ್ಲಬ್ ಸ್ಥಾಪನೆಗೂ ದೇವಿಪ್ರಸಾದ್ ಕಾರಣರಾಗಿದ್ದರು. ಸಾಹಿತ್ಯ ಅಭಿಮಾನಿಯಾಗಿದ್ದ ಲೇಖಕರು ಆಗಿದ್ದ ದೇವಿಪ್ರಸಾದ್ ಅವರ ಮನೆ ಅಪೂರ್ವ ಗ್ರಂಥಾಲಯವನ್ನು ಹೊಂದಿತ್ತು.
ಕೆಲದಿನಗಳ ಅನಾರೋಗ್ಯದ ಬಳಿಕ ದೇವಿಪ್ರಸಾದ್ ಅವರು ಕಳೆದ ಜನವರಿ 3 ರಂದು ಸುಳ್ಯ ತಾಲೂಕಿನಲ್ಲಿ ಆಯೋಜನೆ ಮಾಡಿದ ಅರೆಭಾಷೆ ಸಂಸ್ಕೃತಿ ಅಕಾಡೆಮಿ ಕಡೆಯಿಂದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರನ್ನು ಗೌರವಿಸಲಾಗಿತ್ತು. ಆದರೆ ಇಂದು ಮಧ್ಯಾಹ್ನ ದೇವಿಪ್ರಸಾದ್ ಅವರು ತಮ್ಮ 79ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮಾನಸಿಕವಾಗಿ ಕುಗ್ಗಿ, ಸುಧಾರಿಸಿಕೊಂಡು ಮತ್ತೆ ಯಶಸ್ವಿಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಮಂತಾ
ದೇವಿಪ್ರಸಾದ್ ಅವರಿಗೆ ಅನೇಕ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ. ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ವತಿಯಿಂದ ದೇವಿಪ್ರಸಾದ್ ಕುರಿತು ಸಾಕ್ಷ್ಯಚಿತ್ರ ಸಹ ನಿರ್ಮಾಣಗೊಂಡಿದೆ.