ನವದೆಹಲಿ: ಪಿಸ್ತೂಲ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಂಬಂಧಿ ಶಿಕ್ಷಕರೊಬ್ಬರನ್ನು ಬಾಲಕನೊಬ್ಬನ ಗುಂಡೇಟಿಗೆ ಬಲಿಯಾಗಿರುವ ಘಟನೆ ದೆಹಲಿಯ ಸರಿತಾ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ಪ್ರಶಾಂತ್ ಚೌಹಾಣ್(23) ಮೃತ ದುರ್ದೈವಿ. ಮೂಲತಃ ಉತ್ತರ ಪ್ರದೇಶದ ಪಾಲಿ ಗ್ರಾಮದ ನಿವಾಸಿಯಾಗಿದ್ದು, ಈತ ಶಹದಾರಾದಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸರಿತಾ ವಿಹಾರ್ದಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ಹೋಗಿದ್ದಾಗ ಗುರುವಾರ ಈ ಘಟನೆ ಸಂಭವಿಸಿದೆ.
ಚೌಹಾನ್ ತನ್ನ ಸಂಬಂಧಿ 11ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನನ್ನು ಭೇಟಿಯಾಗಲು ಚಿಕ್ಕಪ್ಪನ ಮನೆಗೆ ಹೋಗಿದ್ದಾರೆ. ಈ ವೇಳೆ ಬಾಲಕ ಲೈಸೆನ್ಸ್ ಇದ್ದ ಪಿಸ್ತೂಲ್ ತೆಗೆದುಕೊಂಡು ಪ್ರಶಾಂತ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನೆ. ನಂತರ ಇಬ್ಬರೂ ಒಂದು ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಬಾಲಕನ ಕೈಯಲ್ಲಿದ್ದ ಗನ್ನಿಂದ ಆಕಸ್ಮಿಕವಾಗಿ ಗುಂಡು ಸಿಡಿದಿದ್ದು, ಅದು ಪ್ರಶಾಂತ್ ಚೌಹಾಣ್ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿ ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.
ದೇಹಕ್ಕೆ ಗುಂಡು ಬಿದ್ದು, ಗಾಯಗೊಂಡಿದ್ದ ಚೌಹಾಣ್ ನನ್ನು ಕುಟುಂಬದವರು ಸಮೀಪದ ಅಪೋಲೋ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ವೈದ್ಯರು ಪರೀಕ್ಷೆ ಮಾಡಿ ಚೌಹಾಣ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿ ಇನ್ನೂ ಅಪ್ರಾಪ್ತನಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಲಾಪರಾಧ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.