ಹಾಸನ: ಎಸ್ಡಿಪಿಐ(SDPI) ರಾಜ್ಯ ಸಂಘಟನಾ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆಯನ್ನು(Afsar Kodlipet) ಪೊಲೀಸರು ಬಂಧಿಸಿದ್ದಾರೆ.
ದೇಶಾದ್ಯಂತ ಪಿಎಫ್ಐ ಮುಖಂಡರ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಇದರ ಭಾಗವಾಗಿ ಕರ್ನಾಟಕದಲ್ಲೂ ದಾಳಿ ನಡೆದಿದೆ. ಎಸ್ಡಿಪಿಐ ಹಾಸನ ಜಿಲ್ಲಾಧ್ಯಕ್ಷ ಸಿದ್ದಿಕ್ ಆನೆಮಹಲ್, ಪ್ರಧಾನ ಕಾರ್ಯದರ್ಶಿ ಸಯ್ಯದ್ ಫರೀದ್ ಅವರನ್ನು ಬಂಧನ ಮಾಡಲಾಗಿದೆ. ಇದನ್ನೂ ಓದಿ: PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್
ಗೃಹ ಇಲಾಖೆ ಸೂಚನೆ ಮೇರೆಗೆ ಸೋಮವಾರ ರಾತ್ರಿ ಸಕಲೇಶಪುರ ಸಿಪಿಐ ನೇತೃತ್ವದಲ್ಲಿ ಆನೆಮಹಲ್ ಸಿದ್ದಿಕ್ನನ್ನು ಹಾಗೂ ಹಾಸನ ಗ್ರಾಮಾಂತರ ಪೊಲೀಸರ ನೇತೃತ್ವದಲ್ಲಿ ಸಯ್ಯದ್ ಫರೀದ್ ಬಂಧಿಸಿ ಉಪವಿಭಾಗಾಧಿಕಾರಿ ಎದುರು ಹಾಜರುಪಡಿಸಿದ್ದಾರೆ.
ಅಫ್ಸರ್ ಹಾಸನಕ್ಕೆ ಬಂದಿರುವ ವಿಚಾರ ತಿಳಿದ ಖಚಿತ ಮಾಹಿತಿ ತಿಳಿದು ಇಂದು ಹಾಸನ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ.
ಮೂವರ ಬಂಧನದ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದು, ಎನ್ಐಎ ದಾಳಿ ಬಳಿಕ ದೇಶದ ವಿವಿಧೆಡೆ ಶಾಂತಿ ಕದಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಹರಿಯುತ್ತಿರುವುದು ತಿಳಿಸಾರಿನ ರಕ್ತವಲ್ಲ. ಪೌಷ್ಟಿಕವಾದ ದನದ ಮಾಂಸ ತಿಂದು ಬೆಳೆದಂತವರು ನಾವು ಎಂದು ಅಫ್ಸರ್ ಕೊಡ್ಲಿಪೇಟೆ ಕಾರ್ಯಕ್ರಮದಲ್ಲಿ ಹೇಳಿದ್ದು ಚರ್ಚೆಗೆ ಗ್ರಾಸವಾಗಿತ್ತು.