ಬಿಗ್ ಬಾಸ್ ಮನೆಯಲ್ಲಿ ಹಾವು ಮುಂಗಸಿಯಂತಿದ್ದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ (Prashant Sambargi) ಕಳೆದೊಂದು ವಾರದಿಂದ ತೀರಾ ಹತ್ತಿರವಾಗಿದ್ದರು. ಒಡಹುಟ್ಟಿದವರಂತೆ ಅನ್ಯೋನ್ಯವಾಗಿದ್ದರು. ಸ್ವತಃ ಬಿಗ್ ಬಾಸ್ಸೇ ಅಚ್ಚರಿ ಪಡುವಷ್ಟು ಒಬ್ಬರಿಗೊಬ್ಬರು ಗೌರವ ಕೊಟ್ಟುಕೊಂಡು ದಿನಗಳನ್ನು ದುಡುತ್ತಿದ್ದರು. ಆದರೆ, ದೀಪಾವಳಿ ದಿನದಂದು ಲಕ್ಷ್ಮಿ ಪಟಾಕಿ ಸಿಡಿಯುವಂತೆ ಇಬ್ಬರೂ ಸಿಡಿದುಕೊಂಡಿದ್ದಾರೆ. ಇವರಿಬ್ಬರ ಮಾತಿಗೆ ಬಿಗ್ ಬಾಸ್ ಮನೆ ರಣರಂಗವಾಗಿ ಮಾರ್ಪಟಿದೆ.
ಕಳೆದ ನಾಲ್ಕೈದು ದಿನಗಳಿಂದ ರೂಪೇಶ್ ರಾಜಣ್ಣ (Rupesh Rajanna)ನನ್ನು ಪ್ರ್ಯಾಂಕ್ ಮಾಡುತ್ತಾ, ಮಜಾ ತಗೆದುಕೊಳ್ಳುತ್ತಿದ್ದರು ಪ್ರಶಾಂತ್ ಸಂಬರ್ಗಿ. ದೆವ್ವದ ವಿಚಾರವಾಗಿ ಕಾವ್ಯಶ್ರೀ ಗೌಡ ಮತ್ತು ಪ್ರಶಾಂತ್ ಸಂಬರ್ಗಿ ಹೂಡಿದ್ದ ಆಟಕ್ಕೆ ರೂಪೇಶ್ ರಾಜಣ್ಣ ಕ್ಲೀನ್ ಬೋಲ್ಡ್ ಆಗಿದ್ದರು. ಹೀಗಾಗಿ ರೂಪೇಶ್ ಮತ್ತು ಪ್ರಶಾಂತ್ ನಡುವೆ ಸ್ನೇಹ ಗಟ್ಟಿಯಾಗುತ್ತಿತ್ತು. ಆದರೆ, ದೀಪಾವಳಿ ದಿನದಂದು ಆಡಿದ ಆಟ ಮಾತ್ರ ಇಬ್ಬರನ್ನೂ ಕೆರಳಿಸಿತ್ತು. ದೀಪಾವಳಿ ಸಂಭ್ರಮವನ್ನು ನುಂಗಿತ್ತು. ಇಬ್ಬರ ಕಿತ್ತಾಟದಲ್ಲಿ ಬಿಗ್ ಬಾಸ್ ಮನೆಯ ಉಳಿದ ಸದಸ್ಯರು ಕೂಡ ಆತಂಕಗೊಂಡರು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
‘ಉಡುಗೊರೆ ಬೇಕಾ, ಕ್ಯಾಪ್ಟನ್ಸಿ ಪಾಯಿಂಟ್ಸ್ ಬೇಕಾ’ ವಿಚಾರವು ಅರುಣ್ ಸಾಗರ್ (Arun Sagar) ಸೇರಿದಂತೆ ಹಲವು ಸದಸ್ಯರನ್ನು ಚರ್ಚೆಗೀಡು ಮಾಡಿತ್ತು. ಮೊದಲ ಹಂತದ ಚರ್ಚೆಯಲ್ಲಿ ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ಸಣ್ಣದಾಗಿ ಕಿತ್ತಾಡಿಕೊಂಡರು. ರೂಪೇಶ್ ಅವರಿಗೆ ದುರಾಸೆ ಎಂದು ಅರುಣ್ ಆಡಿದ ಮಾತು ರೂಪೇಶ್ ರಾಜಣ್ಣರನ್ನು ಕೆರಳಿಸಿತ್ತು. ಇವರಿಬ್ಬರ ನಡುವಿನ ಕಿತ್ತಾಟದಲ್ಲಿ ಪ್ರಶಾಂತ್ ಸಂಬರ್ಗಿ ಮೂಗು ತೂರಿಸಿದರು. ಪ್ರಶಾಂತ್ ಎಂಟ್ರಿ ಕೊಡುತ್ತಿದ್ದಂತೆಯೇ ಜಗಳ ಬೇರೆ ಹಂತ ತಲುಪಿತು.
ಅರುಣ್ ಮತ್ತು ರೂಪೇಶ್ ನಡುವಿನ ಗಲಾಟೆಗೆ ಉರಿವ ಬೆಂಕಿಗೆ ತುಪ್ಪ ಸುರಿದಂತೆ ಅರುಣ್ ಪರ ಬ್ಯಾಟ್ ಬೀಸಿದರು ಪ್ರಶಾಂತ್. ಅದರಿಂದ ಮತ್ತಷ್ಟು ಕುಪಿತಗೊಂಡ ರೂಪೇಶ್ ರಾಜಣ್ಣ ಸಿಡಿದೆದ್ದು ಬಿಟ್ಟರು. ಮಾತಿನ ಭರಾಟೆಯಲ್ಲಿ ರೂಪೇಶ್ ಅವರನ್ನು ‘ಲೇ..’ ಎಂದು ಕರೆದುಬಿಟ್ಟರು ಪ್ರಶಾಂತ್ ಸಂಬರ್ಗಿ. ರೂಪೇಶ್ ರಾಜಣ್ಣ ಮತ್ತಷ್ಟು ಸಿಟ್ಟಾಗಿ ಹೊಡೆಯಲೆಂದು ಹೊರಟರು. ಇಬ್ಬರೂ ಕೈ ಕೈ ಮಿಲಾಯಿಸಿದರು. ದೀಪಾವಳಿ ಸಂಭ್ರಮದಲ್ಲಿದ್ದ ಬಿಗ್ ಬಾಸ್ ಮನೆ ರಣರಂಗವಾಯಿತು. ರೂಪೇಶ್ ಶೆಟ್ಟಿ (Rupesh Shetty) ಇವರನ್ನು ಸಮಾಧಾನ ಪಡಿಸದೇ ಇದ್ದರೆ, ಬಿಗ್ ಬಾಸ್ ಮನೆ ಇನ್ನೇನಾಗುತ್ತಿತ್ತೋ. ಈ ಗಲಾಟೆ ಕಿಚ್ಚನ ಪಂಚಾಯತಿಯಲ್ಲಿ ಯಾವೆಲ್ಲ ಚರ್ಚೆಯನ್ನು ಹುಟ್ಟು ಹಾಕತ್ತೋ ಕಾದು ನೋಡಬೇಕು.