– ಐಷಾರಾಮಿ ಕಾರು ಕೊಡಿಸುವುದಾಗಿ ವಂಚನೆ
ಬೆಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ಬಂದ ಮಹಿಳೆಯೊಬ್ಬಳು ವೈದ್ಯರೊಬ್ಬರಿಗೆ ಕೋಟಿ ಕೋಟಿ ರೂ. ವಂಚಿಸಿರುವ ಪ್ರಕರಣ ವಿಜಯನಗರದಲ್ಲಿ (Vijayanagar) ನಡೆದಿದೆ.
ಐಶ್ವರ್ಯ ಗೌಡ ಎಂಬ ಮಹಿಳೆ ಕಾಸ್ಮಿಟಿಕ್ ಸರ್ಜರಿಗೆ ವಿಜಯನಗರದ ಖಾಸಗಿ ಆಸ್ಪತ್ರೆಗೆ ಬಂದಿದ್ದಳು. ಈ ವೇಳೆ ದೊಡ್ಡ ದೊಡ್ಡವರ ಪರಿಚಯವಿದೆ ಎಂದು ವೈದ್ಯರಿಗೆ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ವೈದ್ಯರಿಗೆ (Doctor) ಐಷಾರಾಮಿ ಕಾರು ಕೊಡಿಸುವುದಾಗಿ ನಂಬಿಸಿ 2.75 ಕೋಟಿ ರೂ. ವಂಚನೆ ಮಾಡಿದ್ದಾಳೆ ಎಂದು ಡಾ.ಗಿರೀಶ್ ಎಂಬವರು ಆರೋಪಿಸಿದ್ದಾರೆ.
ಮಹಿಳೆಯ ಮಾತು ನಂಬಿ ವೈದ್ಯ 2.75 ಕೋಟಿ ರೂ. ಹಣವನ್ನು ಆಕೆಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೇ ಬಳಿಕ 3.25 ಕೋಟಿ ರೂ. ನಗದು ಹಣವನ್ನು ವೈದ್ಯ ನೀಡಿದ್ದರು. ಇದಾದ ಬಳಿಕ ಹಲವು ದಿನಗಳಾದರೂ ಕಾರಿನ ಸುದ್ದಿ ಇಲ್ಲದ ಕಾರಣ ವೈದ್ಯರಿಗೆ ವಂಚನೆ ಹೋಗಿರುವುದು ಅರಿವಿಗೆ ಬಂದಿದೆ. ಬಳಿಕ ಮಹಿಳೆಯನ್ನು ಡಾ.ಗಿರೀಶ್ ವಿಚಾರಿಸಿದಾಗ, ಹಣ ವಾಪಸ್ ಕೊಡುವುದಾಗಿ ಅವರಿಗೆ ತಿಳಿಸಿದ್ದಾಳೆ. ಬಳಿಕ ಹಣ ಕೊಡುವುದಾಗಿ ಮಹಿಳೆ ಕರೆಸಿಕೊಂಡಿದ್ದು, ಅತ್ಯಾಚಾರ ಮಾಡಲು ಬಂದಿದ್ದೀಯ, ಎಂದು ಹೆದರಿಸಿ ಮತ್ತೆ 2 ಲಕ್ಷ ರೂ. ಹಣ ಪೀಕಿದ್ದಾಳೆ.
ಇತ್ತ ಕಾರೂ ಇಲ್ಲದೆ, ಕಾಸೂ ಇಲ್ಲದೆ ವೈದ್ಯ ಪೊಲೀಸ್ (Police) ಠಾಣೆಯ ಮೆಟ್ಟಿಲೇರಿದ್ದಾರೆ. ಐಶ್ವರ್ಯ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.