ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಸ್ತುವಾರಿ ರೋಮಿ ಭಾಟಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬೆಂಗಳೂರಿನ ವಿಜಯನಗರದಲ್ಲಿರುವ ಮಠದಲ್ಲಿ ಸ್ವಾಮೀಜಿ ಅವರನ್ನು ಭೇಟಿಯಾದ ರೋಮಿ ಭಾಟಿ ಅವರು, ಆಮ್ ಆದ್ಮಿ ಪಾರ್ಟಿಯ ತತ್ತ್ವ ಸಿದ್ಧಾಂತಗಳನ್ನು ವಿವರಿಸಿದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರವು ಶಿಕ್ಷಣ, ಆರೋಗ್ಯ, ಸಾರಿಗೆ, ಸುರಕ್ಷತೆ ಹಾಗೂ ಮೂಲ ಸೌಕರ್ಯಗಳಿಗೆ ಸಂಬಂಧಿಸಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಸ್ವಾಮೀಜಿ ಅವರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಯಾವುದೇ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ: ಸಿಎಂ
ಕರ್ನಾಟಕದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40 ಭ್ರಷ್ಟಾಚಾರ ನಡೆಯುತ್ತಿರುವುದರ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದ್ದು, ಈ ಸದುದ್ದೇಶದ ಹೋರಾಟದಲ್ಲಿ ಯಶಸ್ಸು ಸಿಗುವಂತೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ರೋಮಿ ಅವರಿಗೆ ಆಶೀರ್ವಾದ ಮಾಡಿದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು, ‘ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರ ಆಡಳಿತದ ಬಗ್ಗೆ ಸಾಕಷ್ಟು ಕೇಳಿರುವೆ. ಅವರು ದೆಹಲಿಯಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳು ನಮ್ಮಲ್ಲೂ ಜಾರಿಗೆ ಬರಲಿ. ಆಮ್ ಆದ್ಮಿ ಪಾರ್ಟಿಗೆ ಒಳಿತಾಗಲಿ. ರಾಜಕೀಯದಿಂದ ಭ್ರಷ್ಟಾಚಾರವನ್ನು ದೂರವಿಡುವ ನಿಮ್ಮ ಉದ್ದೇಶ ಶೀಘ್ರವೇ ಈಡೇರಲಿ ಎಂದು ತಿಳಿಸಿದರು. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ
ಈ ವೇಳೆ ಒಕ್ಕಲಿಗರ ಸಂಘದ ಚುನಾವಣೆಯ ಅಭ್ಯರ್ಥಿ ಚನ್ನಪ್ಪಗೌಡ ನೆಲ್ಲೂರು, ಎಎಪಿ ಮುಖಂಡರಾದ ನಂಜಪ್ಪ ಕಾಳೇಗೌಡ, ಲಕ್ಷ್ಮೀಕಾಂತ ರಾವ್, ಡಾ.ಸತೀಶ್ ಕುಮಾರ್, ಕುಶಲ ಸ್ವಾಮಿ, ಸುಹಾಸಿನಿ, ಡಾ.ರಮೇಶ್, ಜಗದೀಶ್ ಚಂದ್ರ ಜೊತೆಗಿದ್ದರು.