ಚಿಕ್ಕಮಗಳೂರು: ಚೀಟಿ ಹಣದ (Money) ವಿಚಾರವಾಗಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತರೀಕೆರೆ (Tarikere) ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಸಂಜುನಾಯ್ಕ (27) ಎಂದು ಗುರುತಿಸಲಾಗಿದೆ. ರುದ್ರೇಶ್ ನಾಯ್ಕ (30) ಹತ್ಯೆಗೈದ ಆರೋಪಿಯಾಗಿದ್ದಾನೆ. ಅಮೃತಾಪುರ ಗ್ರಾಮದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ರುದ್ರೇಶ್, ಸಂಜುನಾಯ್ಕನ ತಲೆ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ಯುವಕ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಅಥಣಿ| ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಕಾಮುಕ ಜೈಲುಪಾಲು
ಹತ್ಯೆಯಾದ ಸಂಜುನಾಯ್ಕ ಸರಿಯಾಗಿ ಚೀಟಿ ಕಟ್ಟದೇ ಚೀಟಿ ಸದಸ್ಯರ ಜೊತೆ ಗಲಾಟೆ ಮಾಡುತ್ತಿದ್ದ. ಇದರಿಂದ ಗ್ರಾಮಸ್ಥರು ಅವನನ್ನು ಚೀಟಿಯಿಂದ ತೆಗೆದು ಹಾಕಿದ್ದರು. ಚೀಟಿ ದಿನ ವ್ಯವಹಾರ ನಡೆಯುವ ಜಾಗಕ್ಕೆ ಬಂದ ಸಂಜುನನ್ನ ಸದಸ್ಯರು ವಾಪಸ್ ಕಳಿಸಿದ್ದರು. ಮನೆಗೆ ಹೋಗಿದ್ದ ಸಂಜು ಮನೆಯಿಂದ ಸದಸ್ಯರಿಗೆ ಕರೆ ಮಾಡಿ ಜಗಳ ಮಾಡುತ್ತಿದ್ದ. ಮತ್ತೆ ಸದಸ್ಯರ ಬಳಿ ಬಂದು ನೇರವಾಗಿ ಗಲಾಟೆಗೆ ಮುಂದಾದಾಗ ರುದ್ರೇಶ್ ನಾಯ್ಕ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಜಗಳ ಬಿಡಿಸಲು ಯತ್ನಿಸಿದ ಅವಿನಾಶ್ ಎಂಬುವನಿಗೂ ರುದ್ರೇಶ್ ನಾಯ್ಕ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾನೆ.
ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರುದ್ರೇಶ್ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆ ಕೇಸ್ – ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರಾ ಪತ್ನಿ ಪಲ್ಲವಿ?