ಬೆಂಗಳೂರು: ನಾರಾಯಣಗೌಡ (KaRaVe Narayana Gowda) ಸೇರಿದಂತೆ ಬಂಧಿಸಲಾಗಿರುವ ಕರವೇ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (Karnataka Rakshana Vedike) ನಾರಾಯಣಗೌಡ ಬಣದಿಂದ ಕರವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿಗೌಡ ನೇತೃತ್ವದ ನಿಯೋಗ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿಗೌಡ ಅವರು, ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸಲಾಗಿದೆ. ಹೋರಾಟಗಾರರ ಮನೆಗೆ ಪೊಲೀಸರು ನುಗ್ಗಿ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಪೊಲೀಸರ ದಬ್ಬಾಳಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನೀರಿನ ಅಭಾವ, ಕಬ್ಬಿಣ ಉತ್ಪಾದನೆಗೆ ಪೆಟ್ಟು – ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು
ನಾರಾಯಣಗೌಡರನ್ನು ಎ1 ಆರೋಪಿಯನ್ನಾಗಿ ಮಾಡಿ ಬಂಧನ ಮಾಡಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕರವೇ ಹಿತೈಷಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ನಾರಾಯಣಗೌಡ್ರನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ. ಅವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಚಿಕಿತ್ಸೆ ಕೊಡಿಸಬೇಕು. ಜಾಮೀನು ಕೊಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ವಕೀಲರ ಬಳಿ ಚರ್ಚೆ ಮಾಡಿದ್ದೇವೆ. ಕಾನೂನಾತ್ಮಕ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ಅವರನ್ನು ಹೊರಗೆ ಕರೆದುಕೊಂಡು ಬರುವ ಪ್ರಯತ್ನ ಸತತವಾಗಿ ನಡೆಯುತ್ತಿದೆ. ಕೇಸ್ ಕೈಬಿಡುವ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಬಂಧನ ಆಗಿರುವವರು ಬಿಡುಗಡೆಯಾಗಬೇಕು, ಆ ಬಳಿಕ ನಾವು ಮಾತನಾಡುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಹೋರಾಟಗಾರರ ಕೇಸ್ನ್ನ ಪಾವಸ್ ಪಡೆಯುತ್ತೇವೆ ಎಂದು ಪ್ರತಿ ಸರ್ಕಾರ ಹೇಳಿಕೊಂಡು ಬಂದಿವೆ. ಅದನ್ನು ಎಷ್ಟರ ಮಟ್ಟಿಗೆ ನಂಬಬೇಕು ಎಂಬುದು ಗೊತ್ತಿಲ್ಲ. ಕನ್ನಡಿಗರ ಮೇಲೆ ಹಾಕಿರುವ ಕೇಸ್ನ್ನು ವಾಪಸ್ ಪಡೆಯಬೇಕು ಎಂದು ಡಿಸಿಎಂ ಬಳಿ ಹೇಳಿದ್ದೇವೆ. ಜೊತೆಗೆ ನಾರಾಯಣಗೌಡರಿಗೆ ಜೈಲಿನಲ್ಲಿ ಒಳ್ಳೆಯ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.
ಹೋರಾಟಗಾರರಿಂದ ಸಾರ್ವಜನಿಕರ ಆಸ್ತಿ ಹಾನಿ ಎಂದು ಹೇಳುತ್ತಿದ್ದಾರೆ. ಅಲ್ಲಿ ಹಾಕಿರುವ ನಾಮಫಲಕಗಳು ಇಂಗ್ಲಿಷ್ನಲ್ಲಿ ಇದ್ದವು, ಬಿಬಿಎಂಪಿ ಆದೇಶದ ಪ್ರಕಾರ ನೋಡಿದರೆ ಅದು ಸಾರ್ವಜನಿಕ ಆಸ್ತಿಯಲ್ಲ. ನಾಮಫಲಕಗಳಲ್ಲಿ ಕನ್ನಡವೇ ಇಲ್ಲ, ಅದನ್ನು ಹೇಗೆ ಅಧಿಕೃತ ಎಂದು ಘೋಷಣೆ ಮಾಡುತ್ತೀರಾ? ಅದು ಅಧಿಕೃತ ಅಲ್ಲ ಎಂದ ಮೇಲೆ ಅದು ಸಾರ್ವಜನಿಕ ಆಸ್ತಿ ಹೇಗಾಗುತ್ತದೆ? ಬಿಬಿಎಂಪಿ ಅಧಿಕಾರಿಗಳು ಇದನ್ನು ನೋಡಬೇಕಿತ್ತು. ಎಲ್ಲಿ 60% ಕನ್ನಡ ಬೋರ್ಡ್ ಇರಲ್ವೋ ಅದನ್ನು ತೆಗೆಯುವ ಕೆಲಸ ಮಾಡಬೇಕಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಲೈಸೆನ್ಸ್ ರದ್ದು ಮಾಡಬೇಕಿತ್ತು. ಅದನ್ನ ಮಾಡಲಿಲ್ಲ, ಪೊಲೀಸರು ನಮ್ಮ ಮೇಲೆ ಕೇಸ್ ಹಾಕೋದಲ್ಲ, ಬಿಬಿಎಂಪಿ ಅಧಿಕಾರಿಗಳ ಮೇಲೆ ಕೇಸ್ ಹಾಕಿ ಒಳಗಡೆ ಕಳಿಸಬೇಕು. ಅಧಿಕಾರಿಗಳು ಮಾಡಬೇಕಾದ ಕೆಲಸ ನಾವು ಮಾಡಿದ್ದೇವೆ. ನಾವು ಬಹಳ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೆವು. ನಮ್ಮ ಹೋರಾಟವನ್ನು ಹತ್ತಿಕುವಂತಹ ಕೆಲಸವನ್ನು ಪೊಲೀಸರೇ ಮಾಡಿದ್ದಾರೆ. ಸಿವಿಲ್ ಡ್ರೆಸ್ನಲ್ಲಿ ಬಂದು ಕಾರ್ಯಕರ್ತರ ಜೊತೆ ಕಾರ್ಯಕರ್ತರಾಗಿ ನಿಂತು ಪ್ರಚೋದನೆ ಮಾಡುವ ಕೆಲಸ ಮಾಡಿದ್ದಾರೆ. ಇದೆಲ್ಲ ದಾಖಲೆಗಳು ನಮ್ಮ ಬಳಿ ಇವೆ ಎಂದಿದ್ದಾರೆ.
ಇಷ್ಟು ವರ್ಷಗಳ ಹೋರಾಟಗಳಲ್ಲಿ ಎಲ್ಲಾ ತರದ ಕೇಸ್ಗಳು ಎಲ್ಲಾ ಸರ್ಕಾರಗಳನ್ನೂ ನೋಡಿದ್ದೇವೆ. ಪೊಲೀಸರ ಮೇಲೆ ದಾಳಿ ಮಾಡಿ ದಬ್ಬಾಳಿಕೆ ಮಾಡಿದ್ವಿ, ಕಲ್ಲೆಸೆದ್ವಿ ಅನ್ನೋದಕ್ಕೆ ದಾಖಲೆ ಕೊಡಲಿ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ 5 ಸಾವಿರ ವೇತನ ಹೆಚ್ಚಳ: ಸಚಿವ ಸುಧಾಕರ್