ಪುನೀತ್ ರಾಜ್ ಕುಮಾರ್ ನಿಧನಾನಂತರ ಡಾ.ರಾಜ್ ಕುಟುಂಬ ನಡೆಸುತ್ತಿದ್ದ ‘ಶಕ್ತಿಧಾಮ’ದ ಕುರಿತು ಸಾಕಷ್ಟು ಸುದ್ದಿ ಆಯಿತು. ಅನಾಥ ಮಕ್ಕಳ ಮತ್ತು ಮಹಿಳೆಯರ ಆಶಾಕಿರಣವಾಗಿರುವ ಶಕ್ತಿಧಾಮದ ಮಕ್ಕಳನ್ನು ಪುನೀತ್ ಯಾವ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು ಎನ್ನುವುದೇ ಅವರನ್ನು ಮತ್ತಷ್ಟು ಗೌರವಿಸುವುದಕ್ಕೆ ಕಾರಣವಾಗಿತ್ತು. ಪುನೀತ್ ರಾಜ್ ಕುಮಾರ್ ವಿಧಿವಶರಾದ ನಂತರ ಈ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎನ್ನುವ ಮಾತು ಕೂಡ ಕೇಳಿ ಬಂತು. ಈ ಸಮಯದಲ್ಲಿ ತಮಿಳು ನಟ ವಿಶಾಲ್, ಆ ಮಕ್ಕಳ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ತಿಳಿಸಿದ್ದರು.
ಮೈಸೂರಿಗೆ ಬಂದಿದ್ದ ವಿಶಾಲ್ ಈ ಕುರಿತು ಮತ್ತೆ ಉಚ್ಚರಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ಶಕ್ತಿಧಾಮದ ಮಕ್ಕಳ ವಿಚಾರದಲ್ಲಿ ಸಹಾಯ ಮಾಡಲು ನಾನು ಎಂದಿಗೂ ಸಿದ್ದ. ಆದ್ರೆ ಯಾವ ರೀತಿ ಸಹಾಯ ಬೇಕು ಎಂಬುದರ ಬಗ್ಗೆ ಡಾ.ರಾಜ್ ಕುಟುಂಬದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಅವರು ಅಧಿಕೃತವಾಗಿ ಹೇಳಿದರೆ ನಾನು ಯಾವ ಸಹಾಯಕ್ಕೂ ಸಿದ್ದ. ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿ ಯಾವಾಗಲು ಇರುತ್ತೇನೆ. ಮಕ್ಕಳ ದತ್ತು ಪಡೆಯುವ ವಿಚಾರ ಇರಬಹುದು, ಶಾಲಾ ಕಟ್ಟಡ ನಿರ್ಮಾಣ ವಿಚಾರ ಇರಬಹುದು, ರಾಜ್ ಫ್ಯಾಮಿಲಿಯಿಂದ ಅನುಮತಿ ಸಿಕ್ಕರೆ ನಾನು ಎಲ್ಲಾ ಕೊಡುಗೆಗು ಸಿದ್ದ’ ಎಂದಿದ್ದಾರೆ. ಇದನ್ನೂ ಓದಿ: ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ
ಮುಂದುವರೆದು ಮಾತನಾಡಿದ ಅವರು, ‘ಪ್ರಕಾಶ ರೈ ಅವರು ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಕೊಡುತ್ತಿದ್ದಾರೆ. ಅವರು ನನ್ನ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಆಂಬುಲೆನ್ಸ್ ಕೊಡಿಸಲು ಸಿದ್ದ. ಸದ್ಯಕ್ಕೆ ಶಕ್ತಿಧಾಮಕ್ಕೆ ಯಾವ ಸಾಹಯವೂ ಅಗತ್ಯ ಇದ್ದಂತೆ ಇಲ್ಲ. ರಾಜ್ ಕುಟುಂಬ ಶಕ್ತಿಧಾಮವನ್ನ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಹೊಟ್ಟೆ ತುಂಬಿದಾಗ ನಾವು ಮತ್ತೆ ಒಂದು ತುತ್ತು ತಿನ್ನಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ವಿಶಾಲ್.
ದಕ್ಷಿಣದ ಸಿನಿಮಾಗಳ ಗೆಲುವಿನ ಬಗ್ಗೆಯೂ ಅವರು ಮಾತನಾಡುತ್ತಾ, ‘ದಕ್ಷಿಣ ಭಾರತದ ಸಿನಿಮಾಗಳು ದೇಶದಲ್ಲಿ ದೊಡ್ಡ ಹೆಸರು ಮಾಡುತ್ತಿವೆ. ಕನ್ನಡದಲ್ಲಿ ಕೆಜಿಎಫ್ ನಂತರ ಕಾಂತಾರ ಒಳ್ಳೆಯ ಸಿನಿಮಾ. ನಾನು ಸಹ ಕಾಂತಾರ ನೋಡಿದ್ದೇನೆ. ರಿಷಬ್ ಗೆ ಕರೆ ಮಾಡಿ ಸಿನಿಮಾ ಚೆನ್ನಾಗಿ ಮಾಡಿದ್ದೀರಾ ಎಂದು ಹೇಳಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇಲ್ಲಿನ ಕಲೆ, ಸಂಸ್ಕೃತಿಯನ್ನ ತೋರಿಸುತ್ತಿದ್ದೇವೆ. ಇದು ಉತ್ತರ ಭಾರತದವರಿಗೆ ಇಷ್ಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ, ಉತ್ತರ ಭಾರತದ ಸಿನಿಮಾ ಅಂತೇನಿಲ್ಲ. ಎಲ್ಲವೂ ಭಾರತದ ಸಿನಿಮಾ’ ಎಂದು ವಿಶಾಲ್ ಮಾತನಾಡಿದರು.
ಕನ್ನಡ ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಕೇಳಲಾ ಪ್ರಶ್ನೆಗೆ ‘ನನಗೆ ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ ಇದೆ. 2024 ರ ನಂತರ ಅದು ಸಾಧ್ಯವಾಗಬಹುದು. ನನ್ನ ತಂದೆಗೆ ನಾನು ಕನ್ನಡದಲ್ಲಿ ಸಿನಿಮಾ ಮಾಡಬೇಕು ಎನ್ನುವುದು ದೊಡ್ಡ ಆಸೆ. ಕೆಲವರು ನನ್ನನ್ನು ಸಂಪರ್ಕಿಸಿದ್ದಾರೆ. ಅದನ್ನು ನಾನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಶೀಘ್ರದಲ್ಲೂಂತು ಕನ್ನಡ ಸಿನಿಮಾ ಅಸಾಧ್ಯ’ ಎಂದರು ವಿಶಾಲ್.