ಬಾಗಲಕೋಟೆ: ಪ್ರತಿಯೊಬ್ಬರು ತಮ್ಮ ಮಾತೃಭಾಷೆಯಲ್ಲಿ ಇನ್ನೂ ಒಂದೆರಡು ವರ್ಷಗಳಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯಬಹುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು.
ಜಿಲ್ಲೆಯ ಮುಧೋಳ ನಗರದಲ್ಲಿ ನಡೆದ ವಾಯುವ್ಯ ಪದವೀಧರರ ಶಿಕ್ಷಕರ ಚುನಾವಣೆ ನಿಮಿತ್ತ ಆಯೋಜಿಸಲಾಗಿದ್ದ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಯನ್ನು ತರುತ್ತಿದೆ. ಈ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣವನ್ನು ಇಂಗ್ಲಿಷ್ನಲ್ಲಿ ಅಲ್ಲದೇ ಆಯಾ ರಾಜ್ಯದ ಪ್ರಾದೇಶಿಕ ಮಾತೃಭಾಷೆಯಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತದೆ ಎಂದರು. ಇದನ್ನೂ ಓದಿ: ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್ – ಡಿಎಂಕೆ ಯುವ ನಾಯಕ ಅರೆಸ್ಟ್
ಈ ನಿರ್ಧಾರ ಮಹತ್ವದಾಗಿದ್ದು, ಇನ್ನೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಮಾತೃ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು. ಮಾತೃಭಾಷೆ ಕನ್ನಡದಲ್ಲಿ ಹೆಚ್ಚು ಪ್ರಭುತ್ವ ಮತ್ತು ವಿಸ್ತಾರವಾಗಿ ಓದಿ ಬರೆಯಬಹುದು. ಸ್ನಾತಕೋತರ ಪದವಿಯನ್ನು ಪಡೆಯಬಹುದು. ಈಗಾಗಲೇ ಕೆಲ ರಾಜ್ಯದಲ್ಲಿ ಹಿಂದಿ ಭಾಷೆಯಲ್ಲಿ ವೈದ್ಯಕೀಯ, ಇಂಗ್ಲೀಷ್ ಶಿಕ್ಷಣ ನೀಡಲಾಗುತ್ತಿದೆ. ಆದ್ದರಿಂದ ಇನ್ನೊಂದೆರಡು ಮೂರು ವರ್ಷಗಳಲ್ಲಿ ಉನ್ನತ ಶಿಕ್ಷಣವನ್ನು ಎಲ್ಲರೂ ಕಡ್ಡಾಯವಾಗಿ ಇಂಗ್ಲಿಷ್ ಹಿಂದಿಯಲ್ಲಿ ಬರೆಯಬೇಕೆಂದಿಲ್ಲ. ಅದನ್ನ ಮಾತೃಭಾಷೆ ಕನ್ನಡದಲ್ಲೂ ಕೂಡ ಓದಿ ಬರೆಯಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಎಟಿಎಂಗೆ ಹಣ ಹಾಕು ಅಂತ ಕೊಟ್ಟರೆ, ಹಣದೊಂದಿಗೆ ಎಸ್ಕೇಪ್ ಆದ ಭೂಪ
ಬಡವ ಬಲ್ಲಿದ ಎನ್ನದೇ ಶಿಕ್ಷಣ ಎಲ್ಲರಿಗೂ ದೊರಕಬೇಕೆಂಬ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಸಚಿವರಾದ ಗೋವಿಂದ್ ಕಾರಜೋಳ, ರಾಮಣ್ಣ ತಳೇವಢ ಮತ್ತಿತರರು ಹಾಜರಿದ್ದರು.