ರಾಮನಗರ: ಬಿಸಿಲ ಝಳದಿಂದ ತತ್ತರಿಸಿದ್ದ ರೇಷ್ಮೆನಗರಿ ರಾಮನಗರದಲ್ಲಿ ರಾತ್ರಿ ಮಳೆರಾಯ ಜಿಲ್ಲೆಯ ಹಲವೆಡೆ ತಂಪೆರೆದಿದ್ದಾನೆ. ರಾಮನಗರದಲ್ಲಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ತುಂತುರು ಮಳೆಯಾಗಿದೆ. ಜಿಲ್ಲೆಯ ಹಲವೆಡೆಯಲ್ಲಿಯೂ ಮಳೆ ಬಿದ್ದು ಭೂಮಿ ತಂಪಾಗುವಂತೆ ಮಾಡಿದೆ.
ಬೇಸಿಗೆ ಆರಂಭದ ಹೊಸ್ತಿಲಲ್ಲೇ ಬಿಸಿಲ ಬೇಗೆಯಿಂದ ರೇಷ್ಮೆನಗರಿ ರಾಮನಗರದ ಜನರು ಸಾಕಷ್ಟು ಕಂಗಲಾಗಿದ್ದರು. ಬೆಳಗ್ಗೆಯಿಂದ ಸಂಜೆವರೆಗೂ ಸೂರ್ಯನ ಬಿಸಿಲಿನ ಝಳಕ್ಕೆ ನೆರಳು ಹುಡುಕಾಟ, ರಾತ್ರಿಯ ವೇಳೆ ರಾಮನಗರದ ಸುತ್ತಲು ಇರುವ ಏಳು ಬೆಟ್ಟಗಳ ಬಂಡೆಗಳಿಂದ ಹೊರಬೀಳುವ ಬಿಸಿಯ ಕಾವು ಜನರನ್ನು ತತ್ತರಿಸಿತ್ತು. ಬೆಳಗ್ಗಿನ ವೇಳೆ ಜನರು ಸೂರ್ಯನ ಆರ್ಭಟಕ್ಕೆ ಛತ್ರಿಯ ಮೊರೆ ಹೋಗಿದ್ದರು.
ರಾತ್ರಿ ಸುಮಾರು 10 ಗಂಟೆ ವೇಳೆಗೆ ಕೆಲಕಾಲ ಬಿರುಸಾಗಿಯೇ ಗಾಳಿ ಸಹಿತ ಜೋರಾಗಿ ಮಳೆಯಾಯಿತು. ಬಳಿಕ ಸುಮಾರು 10 ನಿಮಿಷಗಳಿಗೂ ಅಧಿಕ ಕಾಲ ತುಂತುರು ಮಳೆಯಾಗಿದೆ. ಮಳೆಯಿಂದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೆಟ್ಟಕ್ಕೆ ಬೆಂಕಿ ಬೀಳುವ ಹೊತ್ತಿನಲ್ಲಿ ಮಳೆಯಾಗಿರುವುದು ಪರಿಸರ ಪ್ರಿಯರಲ್ಲೂ ಸಂತೋಷನ್ನುಂಟು ಮಾಡಿದೆ. ಎರಡ್ಮೂರು ದಿನಗಳಲ್ಲಿ ಮತ್ತೊಮ್ಮೆ ಮಳೆಯಾಗುವ ಸಂಭವವಿರುವುದಾಗಿ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.