ಬೆಂಗಳೂರು: ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನವನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಖಂಡಿಸಿದ್ದಾರೆ.
ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅಶೋಕ್, ದೇವರಾಜೇಗೌಡ (Devaraje Gowda) ಬಂಧನ ಸರಿಯಲ್ಲ. ಪೆನ್ಡ್ರೈವ್ ಬಿಡುಗಡೆ ಮಾಡಿದ ಬಗ್ಗೆ ಸಾಕ್ಷಿಯನ್ನು ಸಿಬಿಐಗೆ ನೀಡುವುದಾಗಿ ದೇವರಾಜೇಗೌಡ ಹೇಳಿದ್ರು. ಆದರೆ ಅವರನ್ನ ಬಂಧಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಹೆಸರು ಹೇಳದಂತೆ ಧಮ್ಕಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ SIT ಅನ್ನು ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರದ ನಡೆ ಹೀಗೆ ಮುಂದುವರಿದರೆ ನಾವು ಸುಮ್ಮನೆ ಇರಲ್ಲ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರ ಇದೆ, ಮಳೆ ಬಂದ ನಂತರ ರೈತರ ಸಹಾಯಕ್ಕೆ ಸರ್ಕಾರ ಹೋಗಿಲ್ಲ. ರಸಗೊಬ್ಬರ ಸೇರಿ ಇತರ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಆದರೆ ಸರ್ಕಾರಕ್ಕೆ ಪ್ರಜ್ವಲ್ ಪ್ರಕರಣವೇ ಬೇಕಾಗಿದೆ, ಬೇರೆ ಏನೂ ಬೇಕಾಗಿಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ರು.
ಪೆನ್ ಡ್ರೈವ್ ಪ್ರಕರಣ ಎರಡನೇ ಹಂತದ ಚುನಾವಣೆಗೆ ಡ್ಯಾಮೇಜ್ ಮಾಡಿಲ್ಲ. ಎಲ್ಲೂ ಸಹ ಅದು ಪ್ರಭಾವ ಬೀರಿಲ್ಲ. ಉತ್ತರ ಕರ್ನಾಟಕ ಭಾಗ ಆಗಿರುವುದಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಇದೇವೇಳೆ ಅಶೋಕ್ ತಿಳಿಸಿದರು.