ಪುನೀತ್ ರಾಜ್ ಕುಮಾರ್ ಕನಸಿನ ಕೂಸಾಗಿರುವ ಗಂಧದ ಗುಡಿ ಪ್ರಾಜೆಕ್ಟ್ ಬಗ್ಗೆ ಹೊಸದೊಂದು ಸುದ್ದಿ ಬಂದಿದೆ. ಅಪ್ಪು ತುಂಬಾ ಇಷ್ಟಪಟ್ಟು ಮಾಡಿರುವ ಡಾಕ್ಯುಮೆಂಟರಿ ಇದಾಗಿದ್ದು, ಇದಕ್ಕಾಗಿ ಅವರು ಹರಸಾಹಸವನ್ನೇ ಪಟ್ಟಿದ್ದಾರೆ. ಈ ಡಾಕ್ಯುಮೆಂಟರಿಯ ಟ್ರೈಲರ್ ಕಳೆದ ವರ್ಷ ನವೆಂಬರ್ ಒಂದರಂದು ರಿಲೀಸ್ ಆಗಬೇಕಿತ್ತು. ಅದಕ್ಕೂ ಮುನ್ನ ಪುನೀತ್ ಅಗಲಿದರು. ಕನ್ನಡ ರಾಜ್ಯೋತ್ಸವಕ್ಕೆ ಉಡುಗೊರೆಯಾಗಿ ಗಂಧದ ಗುಡಿ ಟ್ರೈಲರ್ ಕೊಡಬೇಕು ಎನ್ನುವ ಅವರ ಕನಸು ಇದೀಗ ಈಡೇರಲಿದೆ.
ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಟ್ರೈಲರ್ ರಿಲೀಸ್ ಮಾಡಬೇಕೆನ್ನುವುದು ಅಪ್ಪು ಕನಸಾಗಿದ್ದರಿಂದ ಅದೇ ತಿಂಗಳು ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನವೆಂಬರ್ ನಲ್ಲಿ ನೂರಾರು ಥಿಯೇಟರ್ ನಲ್ಲಿ ಈ ಡಾಕ್ಯುಮೆಂಟರಿ ತೆರೆ ಕಾಣಲಿದೆ. ಥಿಯೇಟರ್ ನಲ್ಲೇ ಇದನ್ನು ಪ್ರೇಕ್ಷಕರಿಗೆ ತೋರಿಸಬೇಕು ಎನ್ನುವುದು ಅಪ್ಪು ಪ್ಲ್ಯಾನ್ ಕೂಡ ಆಗಿತ್ತು. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್
ಈ ಡಾಕ್ಯುಮೆಂಟರಿಗಾಗಿ ಅನೇಕ ದಿನಗಳ ಕಾಲ ಪುನೀತ್ ರಾಜ್ ಕುಮಾರ್ ಕಾಡು ಮೇಡು ಸುತ್ತಿದ್ದರು. ಸಮುದ್ರದಾಳಕ್ಕೂ ಇಳಿದಿದ್ದರು. ಮುರುಡೇಶ್ವರ ಸೇರಿದಂತೆ ಹಲವು ಕಡೆ ಈ ಡಾಕ್ಯುಮೆಂಟರಿಯ ಚಿತ್ರೀಕರಣ ಮಾಡಿದ್ದರು. ಇದೊಂದು ರೀತಿಯಲ್ಲೇ ಸಿನಿಮಾದ ಮಾದರಿಯಲ್ಲೇ ಶೂಟ್ ಆಗಿರುವುದರಿಂದ ಒಂದು ಗಂಟೆಗೂ ಅಧಿಕ ಸಮಯದ ಡಾಕ್ಯುಮೆಂಟರಿ ಇದಾಗಿದೆಯಂತೆ. ಅಲ್ಲದೇ, ಉನ್ನತ ತಂತ್ರಜ್ಞಾನವನ್ನು ಇದಕ್ಕಾಗಿ ಬಳಕೆ ಮಾಡಲಾಗಿದೆಯಂತೆ.