ಪುಣೆ: ಶಾಲೆಯಲ್ಲಿ ಆಧಾರ್ ಕಾರ್ಡ್ ಮಾಹಿತಿ ನೀಡದ್ದಕ್ಕೆ 10 ವರ್ಷದ ಬಾಲಕನನ್ನು ಶಿಕ್ಷಕರು ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಪುಣೆಯಲ್ಲಿ ನಡೆದಿದೆ. ಥಳಿತದ ಪರಿಣಾಮ ಬಾಲಕನಿಗೆ ಮೊಣಕಾಲಿನಲ್ಲಿ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.
ಇಲ್ಲಿನ ಚಿಂಚವಾಡ ಪ್ರದೇಶದ ಮೋರ್ಯ ಶಿಕ್ಷಣ್ ಸಂಸ್ಥಾದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದು ವಾರಗಳೇ ಕಳೆದಿದ್ದು, ಬಾಲಕನ ಪೋಷಕರು ಚಿಂಚವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಬೆಳಕಿಗೆ ಬಂದಿದೆ. ಪೊಲೀಸರು ಬಾಲ ನ್ಯಾಯ ಕಾಯ್ದೆಯಡಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿಕ್ಷಕರು ನಮ್ಮ ಮಗನಿಗೆ ಆಧಾರ್ ಕಾರ್ಡ್ ಮಾಹಿತಿ ಕೇಳಿದ್ದು ಯಾಕೆ ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಪೋಷಕರು ಹೇಳಿದ್ದಾರೆ.
ನನಗೆ ಗೊತ್ತಿರೋ ಪ್ರಕಾರ, ಪೋಷಕರಿಗೆ ಸಕ್ರ್ಯೂಲರ್ ಮತ್ತು ಇತರೆ ಮಾಹಿತಿಯನ್ನ ಕಳಿಸಲು ಶಾಲೆ ಮೊಬೈಲ್ ಆ್ಯಪ್ವೊಂದನ್ನು ತಯಾರಿಸಲು ಯೋಚಿಸುತ್ತಿದೆ. ಅದಕ್ಕಾಗಿ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮಾಹಿತಿ ಕೇಳಿರಬಹುದು. ಆದ್ರೆ ಅದ್ಕಕಾಗಿ ನಮ್ಮ ಮಗನಿಗೆ ಈ ರೀತಿ ಥಳಿಸುವ ಅಗತ್ಯವಿರಲಿಲ್ಲ ಎಂದು ಬಾಲಕನ ತಾಯಿ ಸಂಗೀತಾ ಹೇಳಿದ್ದಾರೆ.
ಬಾಲಕನನ್ನು ಅಕ್ಟೋಬರ್ 6 ರಿಂದ ಅಕ್ಟೋಬರ್ 15ರವರೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶಿಕ್ಷಕರಿಂದ ಥಳಿತಕ್ಕೊಳಗಾದ ನಂತರ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಘಟನೆಯ ಬಗ್ಗೆ ನಮಗೆ ಹೇಳಲು ಆತ ಭಯಗೊಂಡಿದ್ದ. ನಡೆದಾಡಲು ಕಷ್ಟಪಡುತ್ತಿದ್ದ. ಆಗ ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋದೆವು. ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ನಂತರವಷ್ಟೇ ನಡೆದ ಘಟನೆಯನ್ನು ವಿವರಿಸಿದ. ನಮಗೆ ಇದರಿಂದ ಶಾಕ್ ಆಯ್ತು ಎಂದು ಅವರು ಹೇಳಿದ್ದಾರೆ.
ಬಾಲಕನನ್ನು ಡಿಸ್ಚಾರ್ಜ್ ಮಾಡಿಸಿದ ನಂತರ ಪೋಷಕರು ಪೊಲೀಸರ ಮೊರೆ ಹೋಗಿದ್ದು, ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಶಿಕ್ಷಕರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಗ್ರಾಮದ 800 ಜನರ ಆಧಾರ್ ಕಾರ್ಡ್ನಲ್ಲೂ ಒಂದೇ ಜನ್ಮ ದಿನಾಂಕ