ಇಸ್ಲಾಮಾಬಾದ್/ನವದೆಹಲಿ: 2019ರ ಪುಲ್ವಾಮಾ ಉಗ್ರ ದಾಳಿಯ (Pulwama Attack) ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ನನ್ನು(Hamza Burhan) ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ತರಬೇತುದಾರನ ರೂಪದಲ್ಲಿ ಅಡಗಿದ್ದ ಹಮ್ಜಾ ಬುರ್ಹಾನ್ ಅಲಿಯಾಸ್ ‘ಡಾಕ್ಟರ್’ ಮೇಲೆ ಅಪರಿಚಿತ ವ್ಯಕ್ತಿಗಳು ಮುಜಾಫರಾಬಾದ್ ಕಚೇರಿಯೊಳಗೆ ನುಗ್ಗಿ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ ಬಳಿಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ಹಮ್ಜಾ ಬುರಾನ್ನ ನಿಜವಾದ ಹೆಸರು ಅರ್ಜುಮಂಡ್ ಗುಲ್ಜಾರ್ ದಾರ್ ಎಂದು ತಿಳಿದುಬಂದಿದೆ. 2022ರಲ್ಲಿ ಭಾರತದ ಗೃಹ ಸಚಿವಾಲಯ ಆತನನ್ನು ಉಗ್ರನೆಂದು ಘೋಷಿಸಿತ್ತು.

ಹಮ್ಜಾ ಬುರ್ಹಾನ್ ಯಾರು?
ಈತ ಪಾಕಿಸ್ತಾನ ಬೆಂಬಲಿತ ‘ಅಲ್-ಬದರ್’ ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ಆಗಿದ್ದನು. ಮೂಲತಃ ಜಮ್ಮು ಮತ್ತು ಕಾಶ್ಮೀರದ (Jammu Kashmir) ಪುಲ್ವಾಮಾ ಜಿಲ್ಲೆಯ ರತ್ನಿಪೋರಾದ ನಿವಾಸಿಯಾಗಿದ್ದ ಈತ, ವರ್ಷಗಳ ಹಿಂದೆ ಗಡಿ ದಾಟಿ ಪಾಕಿಸ್ತಾನ ಸೇರಿಕೊಂಡಿದ್ದನು. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 7 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?
2019ರ ಪುಲ್ವಾಮಾ ಉಗ್ರರ ದಾಳಿಯಲ್ಲಿ ಈತ ಓವರ್ ಗ್ರೌಂಡ್ ವರ್ಕರ್ ಆಗಿ ಪ್ರಮುಖ ಸಂಚು ರೂಪಿಸಿದ್ದನು. ದಕ್ಷಿಣ ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುವ ಮತ್ತು ಭಯೋತ್ಪಾದಕರಿಗೆ ಧನಸಹಾಯ ನೀಡುವ ಕೆಲಸ ಮಾಡುತ್ತಿದ್ದ.
ಭಾರತ ಸರ್ಕಾರದ ಗೃಹ ಸಚಿವಾಲಯವು 2022 ರಲ್ಲಿ ಈತನನ್ನು ಯುಎಪಿಎ (UAPA) ಕಾಯ್ದೆಯಡಿ ಅಧಿಕೃತವಾಗಿ ‘ಭಯೋತ್ಪಾದಕ’ ಎಂದು ಘೋಷಿಸಿತ್ತು.
ಪಾಕಿಸ್ತಾನ ಮತ್ತು ಪಿಒಕೆ ನೆಲದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ಗುರಿಯಾಗಿಸಿ ನಡೆಯುತ್ತಿರುವ ಸರಣಿ ಹತ್ಯೆಗಳಲ್ಲಿ ಇದು ಇತ್ತೀಚಿನ ಪ್ರಮುಖ ಘಟನೆಯಾಗಿದೆ
ಫೆಬ್ರವರಿ 14, 2019ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್ಪಿಎಫ್ ವಾಹನಗಳ ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು. ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಭದ್ರತಾ ಪಡೆಗಳ ಬಸ್ಗೆ ಡಿಕ್ಕಿ ಹೊಡೆಸಲಾಗಿತ್ತು. ಈ ದಾಳಿ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಪುಲ್ವಾಮಾ ದಾಳಿಯ ಬಳಿಕ, ಈ ಕೃತ್ಯದ ಹಿಂದೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಭಾರತ ಆರೋಪಿಸಿತ್ತು. ಇದರ ಬೆನ್ನಲ್ಲೇ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ನಲ್ಲಿ ಇರುವ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

