ಬೆಂಗಳೂರು: ಕ್ರೈಂ ವರದಿಗಾರರು ಮತ್ತು ನಗರ ಪೊಲೀಸರು ಜಂಟಿಯಾಗಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾಟದಲ್ಲಿ ಪಬ್ಲಿಕ್ ಟಿವಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಪ್ರತ್ಯೇಕ ಕಬಡ್ಡಿ ಪಂದ್ಯ ನಡೆದಿದ್ದು, ಹೊನಲು ಬೆಳಕಿನ ಕಬಡ್ಡಿ ಪಂದ್ಯದಲ್ಲಿ ಮಾಧ್ಯಮ ವಿಭಾಗದಲ್ಲಿ ಪಬ್ಲಿಕ್ ಟಿವಿ, ಪೊಲೀಸರ ವಿಭಾಗದಲ್ಲಿ ಕೇಂದ್ರ ವಿಭಾಗ ಪ್ರಶಸ್ತಿ ಜಯಿಸಿತು.
ಪಬ್ಲಿಕ್ ಟಿವಿ ಹಾಗೂ ಕ್ರೈಂ ವರದಿಗಾರರ ಎ ತಂಡ ಫೈನಲ್ ಪ್ರವೇಶಿಸಿತ್ತು. ಫೈನಲ್ ಪಂದ್ಯದಲ್ಲಿ ಪಬ್ಲಿಕ್ ಟಿವಿ 49 ಅಂಕ ಪಡೆದರೆ ಕ್ರೈಂ ವರದಿಗಾರರ ಎ ತಂಡ 14 ಪಡೆದುಕೊಂಡಿತ್ತು. 35 ಅಂಕಗಳಿಂದ ಗೆಲುವು ಸಾಧಿಸಿದ ಪಬ್ಲಿಕ್ ಟಿವಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ಪಬ್ಲಿಕ್ ಟಿವಿ ತಂಡದ ಪರ ಉತ್ತಮ ಪ್ರದರ್ಶನ ತೋರಿದ ಗಜ ಅವರು ‘ಅತ್ಯುತ್ತಮ ಆಟಗಾರ’ ಪ್ರಶಸ್ತಿಗೆ ಭಾಜನರಾದರು. ತಂಡದ ನಾಯಕ ಬೀರಪ್ಪ ಅವರ ಆಟವೂ ನೋಡುಗರಿಗೆ ರಸದೌತಣ ನೀಡಿತ್ತು.
ಪೊಲೀಸರ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ಕೇಂದ್ರ ವಿಭಾಗ ಪೂರ್ವ ವಿಭಾಗವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.