ಕೋಲಾರ: ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದು ಪದವಿ ಮುಗಿಸಿದ ಕೋಲಾರ ತಾಲೂಕು ಕೋಡಿ ಕಣ್ಣೂರು ಗ್ರಾಮದ ಭಾಗ್ಯಶ್ರೀ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಚೆನ್ನಾಗಿ ಓದಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಸೀಟು ಪಡೆದು ಪ್ರವೇಶ ಶುಲ್ಕ ಭರಿಸಲಾಗದೇ ದಿಕ್ಕು ದೋಚದೇ ಕಂಗಲಾಗಿದ್ದರು. ಓದಲೇ ಬೇಕು ಎಂಬ ಛಲದಿಂದ ಓದಲು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು.
ಬೆಳಕು ಕಾರ್ಯಕ್ರಮದ ಮೂಲಕ ಎಂಬಿಎ ಮಾಡಬೇಕೆಂಬ ಹೆಬ್ಬಯಕೆಯನ್ನು ಈಡೇರಿಸುವುದಾಗಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅಂದು ಭರವಸೆ ನೀಡಿದ್ದರು. ಆದಾಗಿ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಯುವತಿಯ ವಿದ್ಯಾಭ್ಯಾಸದ ಆಸಕ್ತಿಯನ್ನು ನೋಡಿ ಆಕೆಯ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಭರಿಸುವುದಾಗಿ ಹೇಳಿದರು. ಅವರು ಕೊಟ್ಟ ಮಾತಿನಿಂದ ವಿದ್ಯಾಭ್ಯಾಸಕ್ಕೆ 2 ಲಕ್ಷ ರೂಪಾಯಿಗಳ ನೆರವು ನೀಡಿ ಯುವತಿಯ ಬದುಕಿಗೆ ಬೆಳಕಾಗಿದ್ದಾರೆ.
ವಿದ್ಯಾರ್ಥಿನಿ ಭಾಗ್ಯಶ್ರೀ ಓದಿ ಎಂಬಿಎ ಪದವಿಯನ್ನು ಪೂರ್ಣ ಗೊಳಿಸಿ ಕೆಲಸಕ್ಕೆ ಸೇರಿಕೊಂಡು ಖುಷಿ ಪಟ್ಟಿದ್ದಾರೆ. ಅಷ್ಟಕ್ಕೆ ತೃಪ್ತಿ ಪಡದ ವಿದ್ಯಾರ್ಥಿನಿ ತನ್ನ ಮೊದಲ ತಿಂಗಳ 20 ಸಾವಿರ ರೂಪಾಯಿ ಸಂಬಳವನ್ನ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ನೀಡಲು ಬಂದಿದ್ದಾರೆ. ಪಬ್ಲಿಕ್ ಟಿವಿ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವ ಕನಸು ಕಟ್ಟಿಕೊಂಡಿದ್ದಾರೆ.
ಒಟ್ಟಿನಲ್ಲಿ ಅದೆಷ್ಟೋ ನೊಂದವರಿಗೆ, ಕತ್ತಲೆಯಲ್ಲಿರುವವರಿಗೆ ಬೆಳಕಿನ ಆಸರೆ ನೀಡಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ಬೆಳಕು ಕಾರ್ಯಕ್ರಮ ನೊಂದರ ಬಾಳಿನ ದಾರಿ ದೀಪವಾಗಿ ಕಂಗೊಳಿಸುತ್ತಿದೆ.
https://youtu.be/ipVNIalXQ9M