ಬೆಳಗಾವಿ: ಹೆಚ್ಐವಿ ಎನ್ನುವ ಪದ ಕೇಳಿದರೆ ಸಾಕು ಜನ ದೂರ ಸರಿಯುತ್ತಾರೆ. ಇನ್ನು ಹೆಚ್ಐವಿ ಬಾಧಿತ ಮಕ್ಕಳು ಕಥೆ ಏನಾಗ್ಬೇಡಾ? ಆದರೆ, ಬೆಳಗಾವಿಯ ಪಬ್ಲಿಕ್ ಹೀರೋ ಒಬ್ಬರು ಇಂಥ ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಕಣಬರ್ಗಿ ನಿವಾಸಿ ಮಹೇಶ್ ಜಾಧವ್ ವೃತ್ತಿಯಲ್ಲಿ ಡಿಪ್ಲೊಮಾ ಎಂಜಿನಿಯರ್. ಆದರೆ ಇವರು ಸಮಾಜ ಸೇವೆ ಮಾತ್ರ ವಿಭಿನ್ನ. ಎಚ್ಐವಿ ಪೀಡಿತ ಅನಾಥ ಮಕ್ಕಳ ವಸತಿ ನಿಲಯಕ್ಕಾಗಿ ತಮ್ಮ ಸ್ವಂತ ಮನೆಯನ್ನು ಬಿಟ್ಟುಕೊಟ್ಟು ಮಕ್ಕಳ ಶಾಲಾ ಶಿಕ್ಷಣ, ಆರೈಕೆ ಸಹಿತ ಉನ್ನತ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ.
ಪ್ರೇರಣೆ ಏನು?
ಗೆಳೆಯನ ಹುಟ್ಟುಹಬ್ಬದ ನಿಮಿತ್ತವಾಗಿ ಬೆಳಗಾವಿ ಜಿಲಾಸ್ಪತ್ರೆಗೆ ಹಣ್ಣು ವಿತರಿಸಲು ಹೋದಾಗ ಅಪಘಾತವಾದ ಪಾಸಿಟವ್ ಮಗುವೊಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿತ್ತು. ವೈದ್ಯರು ನೋಡದೇ ನಿರಾಕರಿಸಿದಾಗ ಮಹೇಶ್ ಅವರು ಮನನೊಂದು ಇಂಥ ಮಕ್ಕಳ ಬೆಂಬಲಕ್ಕೆ ನಿಂತು ಇಂದಿಗೆ ದೊಡ್ಡದಾದ ಸಂಸ್ಥೆ ಕಟ್ಟಿ 2,200 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅದಲ್ಲದೆ ಸಂಸ್ಥೆಯಲ್ಲಿ 76 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಅದರಲ್ಲಿ 16 ಜನ ಅನಾಥ ಮಹಿಳೆಯರು ಸೊಂಕಿನಿಂದ ಬಳಲುತ್ತಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ.
ಸಮಾಜದಲ್ಲಿ ತಿರಸ್ಕೃತಗೊಂಡ ಇಂಥ ಮಕ್ಕಳಿಗೆ ಸೂರು ಕಲ್ಪಿಸಿ ದಿನನಿತ್ಯ ಅವರ ಆರೋಗ್ಯ ಜೊತೆಗೆ ವಿದ್ಯಾಭ್ಯಾಸವನ್ನು ಕಲ್ಪಸುವುದು ದೊಡ್ಡ ಕೆಲಸ. ಚಿಕ್ಕ ವಯಸ್ಸಿನಲ್ಲಿಯೇ ಮಹೇಶ ಇಂಥ ದೊಡ್ಡ ಕೆಲಸಕ್ಕಾಗಿ ಕೈ ಹಾಕಿದ್ದನ್ನು ಕಂಡ ಪಾಲಕರು ತಮ್ಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆಯನ್ನು ಮಹೇಶ ಸಂಸ್ಥೆಗೆ ನೀಡಿ ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
2008 ರಲ್ಲಿ ಕೇವಲ 6 ಮಕ್ಕಳನ್ನು ಪಡೆದುಕೊಂಡು ಮಹೇಶ್ ಅವರು ಈ ಸಮಾಜ ಸೇವೆಯನ್ನು ಆರಂಭಿಸಿದರು. ತಮ್ಮ ಸಂತ ಮನೆಯನ್ನು ಕೆಡವಿ ಅಲ್ಲಿ ಈಗ ದೊಡ್ಡದಾದ ವಸತಿ ಶಾಲೆಯನ್ನು ಕಟ್ಟುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಕಂಡು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಪೋಷಣೆಗಾಗಿ ಆಯಾಗಳು, ಅಂಗನವಾಡಿ, ಆಸ್ಪತ್ರೆಗೆ, ಶಾಲೆಗೆ ಕಳುಹಿಸಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ ಎಲ್ಲರನ್ನು ಒಂದೇ ಕುಟುಂಬದಂತೆ ಸಾಕುತ್ತಿರುವ ಮಹೇಶ್ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯಧನ ಪಡೆಯದೇ ಈ ಸೇವೆ ಮಾಡುತ್ತಿರುವುದು ವಿಶೇಷ.