– ಗುಬ್ಬಿಯ ಕಾಡುಶೆಟ್ಟಿಹಳ್ಳಿ ಶಾಲೆ ನಮ್ಮ ಪಬ್ಲಿಕ್ ಹೀರೋ
ತುಮಕೂರು: ಸರ್ಕಾರಿ ಶಾಲೆಗಳೆಂದರೇ ಮೂಗು ಮುರಿಯುವವರೇ ಹೆಚ್ಚು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಅಪವಾದ ಎಂಬಂತೆ ಕಾಡಶೆಟ್ಟಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲದೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ರಾಜ್ಯದ ಗಮನ ಸೆಳೆದಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಾಡಶೆಟ್ಟಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ. ಈ ಶಾಲೆಗೆ ದಾಖಲು ಪಡೆಯಲು ದೊಡ್ಡ ದೊಡ್ಡವರ ಶಿಫಾರಸು ಪಡೆಯಲಾಗುತ್ತೆ. ಅಷ್ಟರ ಮಟ್ಟಿಗೆ ಈ ಶಾಲೆ ಉತ್ತಮವಾಗಿದೆ. ನಾಲ್ಕು ವರ್ಷದ ಹಿಂದೆ ಕೇವಲ 70 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ ಬರೊಬ್ಬರಿ 400 ವಿದ್ಯಾರ್ಥಿಗಳಿದ್ದಾರೆ. ಸುಸಜ್ಜಿತ ಕೊಠಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ಗಳು ನಡೆಯುತ್ತವೆ. ಸೈನ್ಸ್ ಲ್ಯಾಬ್, ಲಾಂಗ್ವೇಜ್ ಲ್ಯಾಬ್, ಲೈಬ್ರೆರಿ, ದೊಡ್ಡ ಆಡಿಟೋರಿಯಂ ಹೀಗೆ ಎಲ್ಲ ಸೌಲಭ್ಯವನ್ನು ಮಕ್ಕಳಿಗೆ ಒದಗಿಸಿಕೊಡಲಾಗಿದೆ.
ಪ್ರತಿ ಶನಿವಾರ ಈ ಆಡಿಟೋರಿಯಂನಲ್ಲಿ ವಿದ್ಯಾರ್ಥಿಗಳ ಕಲಾ ಪ್ರದರ್ಶನವಾಗುತ್ತದೆ. ಇದರ ಜತೆಗೆ ಬಯಲು ರಂಗಮಂದಿವೂ ಇದೆ. ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂಬುದನ್ನು ಅರಿತ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಇಲ್ಲಿಗೆ ಸೇರಿಸುತ್ತಿದ್ದಾರೆ. 5 ವ್ಯಾನ್ಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸ್ತಿದ್ದಾರೆ. ಇಷ್ಟಕ್ಕೂ ಈ ಶಾಲೆ ಇಷ್ಟೊಂದು ಅಭಿವೃದ್ಧಿ ಹೊಂದಲು ಕಾರಣ, ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಕಾಡುಶೆಟ್ಟಿಹಳ್ಳಿ ಸತೀಶ್ ಮತ್ತು ಅವರ ತಂಡ. ಸತೀಶ್ ತಮ್ಮ ತಂಡದೊಂದಿಗೆ ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಆರಂಭಿಸಿದರು. ಕಲಾವಿದೆ ಬಿ.ಜಯಶ್ರೀ ರಾಜ್ಯಸಭಾ ಸದಸ್ಯರಾಗಿದ್ದಾಗ ಈ ಶಾಲೆಗೆ 1 ಕೋಟಿ ರೂ ಅನುದಾನ ಕೊಟ್ಟಿದ್ರು. ಅದರ ಪರಿಣಾಮವಾಗಿ ಈ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳಿಗಿಂತ ಬೆಸ್ಟ್ ಆಗಿದೆ.
ಶಿಕ್ಷಕರ ಕೊರತೆ ಕಂಡು ಬಂದಲ್ಲಿ ಪೋಷಕರೇ ಸಭೆ ಸೇರಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಾರೆ. ದಾನಿಗಳ ನೆರವು ನಿರಂತರವಾಗಿ ಸಿಗುತ್ತಿದೆ.